ಬೆಂಗಳೂರು: ದಕ್ಷಿಣ ಭಾರತದಲ್ಲಿ ನಡೆಯಲಿರುವ ಮೊತ್ತಮೊದಲ ಭಾರತೀಯ ಸೇನಾ ದಿನಾಚರಣೆಗೆ ಉದ್ಯಾನ ನಗರಿ ಸಜ್ಜಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಹೊರಗಡೆ ಇದೇ ಪ್ರಥಮ ಬಾರಿಗೆ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆ್ಯಂಡ್ ಸೆಂಟರ್ (ಎಂಇಜಿ) ಮೈದಾನ ಸಾಕ್ಷಿಯಾಗಲಿದೆ.
ಇಲ್ಲಿನ ಗೋವಿಂದಸ್ವಾಮಿ ಪರೇಡ್ ಮೈದಾನದಲ್ಲಿ ಪೂರ್ವಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಸೇನಾ ದಿನದ ಅಂಗವಾಗಿ ಜ. 15ರಂದು ದೇಶದ ಪ್ರಮುಖ ಎಂಟು ರೆಜಿಮೆಂಟ್ಗಳ ಆಕರ್ಷಕ ಪಥಸಂಚಲನ, ದೇಶೀಯ ನಿರ್ಮಿತ ರಕ್ಷಣ ಉಪಕರಣಗಳ ಪ್ರದರ್ಶನ, ಸೇನಾ ಸಾಮರ್ಥ್ಯ ಪ್ರದರ್ಶನ ನಡೆಯಲಿದೆ. ಅಂದು ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಭೂಸೇನಾ ಮುಖ್ಯಸ್ಥ ಜ| ಮನೋಜ್ ಪಾಂಡೆ ಭಾಗವಹಿಸಲಿದ್ದಾರೆ ಎಂದು ಕೇರಳ ಆ್ಯಂಡ್ ಕರ್ನಾಟಕ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಜ| ರವಿ ಮುರುಗನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವೈಮಾನಿಕ ಕಸರತ್ತು
ಪ್ರಮುಖ ಆಕರ್ಷಣೆ
ಧ್ರುವ ಮತ್ತು ರುದ್ರ ಹೆಲಿಕಾಪ್ಟರ್ಗಳಿಂದ ವೈಮಾನಿಕ ಕಸರತ್ತು ಪ್ರದರ್ಶನ, ಬಹುಹಂತದ ರಾಕೆಟ್ ಉಡ್ಡಯನ ವ್ಯವಸ್ಥೆ “ಪಿನಾಕಾ’, ಸ್ವಯಂಚಾಲಿತ ಕೆ-9 ವಜ್ರ ಗನ್, ಟಿ-90 ಟ್ಯಾಂಕ್ಗಳು, ಸ್ವಾತಿ ರೇಡಾರ್, 155 ಎಂಎಂ ಗನ್ಗಳು, ಬಿಎಂಪಿ- 2, ಭೀಷ್ಮ ಟ್ಯಾಂಕರ್, ತುಂಗುಸ್ಕಾ ವೈಮಾನಿಕ ರಕ್ಷಣ ವ್ಯವಸ್ಥೆ, ಸೇತುವೆ ನಿರ್ಮಾಣಕ್ಕೆ ಬಳಸುವ ಟ್ಯಾಂಕ್ಗಳನ್ನು ಪ್ರದರ್ಶಿಸಲಾಗುತ್ತದೆ.
ರಕ್ಷಣ ಸಚಿವರು ಭಾಗಿ
ಜ. 15ರಂದು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಆರ್ಮಿ ಸರ್ವಿಸ್ ಸೆಂಟರ್ (ಎಸ್ಸಿ)ನಲ್ಲಿ ನಡೆಯಲಿರುವ ಮಿಲಿಟರಿ ಟ್ಯಾಟೂನಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಅಲ್ಲಿ ವಿನೂತನ ಕಾರ್ಯಕ್ರಮಗಳು ಜರಗಲಿವೆ.
Related Articles
11 ಸಾವಿರ ಜನ ವೀಕ್ಷಣೆ
3 4ದಿನಗಳಿಂದ ಎಂಇಜಿ ಮೈದಾನದಲ್ಲಿ ಸೇನಾ ದಿನಾಚರಣೆಯ ಪೂರ್ವಪ್ರದರ್ಶನ ನಿರಂತರವಾಗಿ ನಡೆಯುತ್ತಿದ್ದು, ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಇದುವರೆಗೆ 11 ಸಾವಿರ ಜನ ಪ್ರದರ್ಶನ ವೀಕ್ಷಿಸಿದ್ದು, ಇದರಲ್ಲಿ ಮಕ್ಕಳೇ ಹೆಚ್ಚು ಎಂದು ಜ| ರವಿ ಮುರುಗನ್ ತಿಳಿಸಿದರು. ಬುಧವಾರದಿಂದ ಪಾಸ್ ಹೊಂದಿದವರಿಗೆ ಮಾತ್ರ ಅವಕಾಶ ಇರಲಿದೆ.
ಸಾಮಾನ್ಯವಾಗಿ ದಿಲ್ಲಿಯಲ್ಲಿ ಭಾಗವಹಿಸುತ್ತಿದ್ದೆವು. ಈಗ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲೇ ನಮ್ಮವರೆದುರು ಪ್ರದರ್ಶನ ನೀಡಲಿರುವುದು ಸಹಜವಾಗಿ ಹೆಮ್ಮೆ ಮತ್ತು ಖುಷಿ ಕೊಡುತ್ತಿದೆ. ಹತ್ತು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
– ಶಿವನಗೌಡ ಕೆಂಚನಗೌಡರ,
ಎಂಇಜಿ ಆ್ಯಂಡ್ ಸೆಂಟರ್ ಯೋಧ