Advertisement

ಉಡುಪಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ 74 ಜಾನುವಾರು ಸಾವು

11:18 AM Feb 22, 2023 | Team Udayavani |

ಉಡುಪಿ: ಹೈನುಗಾರಿಕೆ, ಕೃಷಿಕ ಸಮೂಹವನ್ನೇ ಬೆಚ್ಚಿ ಬೀಳಿಸಿರುವ ಚರ್ಮಗಂಟು ರೋಗಕ್ಕೆ ಜಿಲ್ಲೆಯಲ್ಲಿ ಈವರೆಗೂ 74 ಜಾನುವಾರುಗಳು ಸಾವನ್ನಪ್ಪಿವೆ. ಡಿಸೆಂಬರ್‌, ಜನವರಿ ತಿಂಗಳಲ್ಲಿ ರೋಗ ಪ್ರಮಾಣ ಹೆಚ್ಚಿದ್ದು, ಜಾನುವಾರುಗಳ ಜೀವ ಹಿಂಡಿತ್ತು, ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಜಾನುವಾರು ರೋಗಬಾಧೆಯಿಂದ ಬಳಲುತ್ತಿವೆ. ಜಿಲ್ಲೆಯಲ್ಲಿ 2,57,184 ಲಕ್ಷ ಜಾನುವಾರುಗಳಿದ್ದು, ಸಂಪೂರ್ಣ ಲಸಿಕೆ ಹಾಕಿಸುವ ಪ್ರಕ್ರಿಯೆ ಜಿಲ್ಲೆ ಪಶುವೈದ್ಯರು, ಸಿಬಂದಿ ತಂಡ ಮುಗಿಸಿದೆ. ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ.

Advertisement

ಆರಂಭದಲ್ಲಿ ಬೇರೆ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿದ್ದು, ಅನಂತರ ಉಡುಪಿ ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿರುವುದು ಹೈನುಗಾರಿಕೆ, ಕೃಷಿಕ ವರ್ಗದವರಲ್ಲಿ ತೀರ ಆತಂಕಕ್ಕೆ ಕಾರಣವಾಗಿತ್ತು. ಹೈನುಗಾರರು ಚರ್ಮಗಂಟು ರೋಗದಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಹಸುಗಳು ಆರ್ಥಿಕ ಶಕ್ತಿಯ ಜತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿವೆ. ಬೈಂದೂರು, ಹೆಬ್ರಿ, ಬ್ರಹ್ಮಾವರ ಭಾಗದಲ್ಲಿ ಹೆಚ್ಚು ಜಾನುವಾರುಗಳು ಮೃತಪಟ್ಟಿದೆ. ಪ್ರಸ್ತುತ ಚರ್ಮಗಂಟು ರೋಗ ಹಬ್ಬುವಿಕೆ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಈಗಾಗಲೆ ಮೃತಪಟ್ಟ ಜಾನುವಾರುಗಳ ಸಾಕಣೆದಾರರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

ಶೀಘ್ರದಲ್ಲೇ ಪರಿಹಾರ
ರೋಗ ಪ್ರಮಾಣ ಸಂಪೂರ್ಣ ಇಳಿಮುಖವಾಗಿದ್ದು, ಹೈನುಗಾರರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಎಲ್ಲ ದನಗಳಿಗೆ ಲಸಿಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನಿರಂತರ ಲಸಿಕೆ ಹಾಕುವುದು, ಕ್ವಾರಂಟೈನ್‌ ನೀತಿ, ವ್ಯವಸ್ಥಿತ ಚಿಕಿತ್ಸೆಯಿಂದ ರೋಗ ಹಬ್ಬುವ ಪ್ರಮಾಣ ನಿಯಂತ್ರಿಸಲು ಸಾಧ್ಯವಾಯಿತು. ಈಗಾಗಲೇ ಸಾವನ್ನಪ್ಪಿರುವ ಹಸುಗಳಿಗೆ ಪರಿಹಾರ ನೀಡಲು ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಹೈನುಗಾರರಿಗೆ ಪರಿಹಾರ ದೊರೆಯಲಿದೆ.
-ಡಾ| ಶಂಕರ್‌ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನ ಇಲಾಖೆ, ಉಡುಪಿ ಜಿಲ್ಲೆ

ಸರಕಾರ ಕ್ರಮ ಕೈಗೊಳ್ಳಲಿ
ಮೂರು ವರ್ಷಗಳ ಅವಧಿಗೆ ಸಾಮೂಹಿಕ ಜಾನುವಾರು ವಿಮೆ ಅಡಿಯಲ್ಲಿ ದ.ಕ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜಿಲ್ಲೆಯಲ್ಲಿ 50 ಸಾವಿರ ದನಗಳಿಗೆ ವಿಮೆ ಮಾಡಿಸಲಾಗಿದೆ. ಇದರಲ್ಲಿ ಶೇ.75 ವಿಮಾ ಮೊತ್ತವನ್ನು ಒಕ್ಕೂಟವೇ ಭರಿಸಲಿದ್ದು, ಉಳಿದ ಶೇ.25 ಮೊತ್ತವನ್ನು ದನ ಸಾಕಣೆದಾರರು ಭರಿಸಬೇಕು. ದನಗಳಿಗೆ ವಿಮೆ ಮಾಡಿಸದವರು ಈ ವಿಮಾ ಸೌಲಭ್ಯ ಪಡೆಯಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಚರ್ಮಗಂಟು ರೋಗದಿಂದ ಸಾವನ್ನಪ್ಪಿರುವ ಜಾನುವಾರುಗಳಿಗೆ ಸರಕಾರ ಗರಿಷ್ಠ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಬೇಕು.
– ಸಾಣೂರು ನರಸಿಂಹ ಕಾಮತ್‌, ರಾಜ್ಯ ಸಂಚಾಲಕ, ಸಹಕಾರ ಭಾರತೀ ಹಾಲು ಪ್ರಕೋಷ್ಠ

ಪರಿಹಾರ ಮೊತ್ತವೆಷ್ಟು ?
ಒಟ್ಟು ದನಗಳ ಸಂಖ್ಯೆಗೆ ಹೋಲಿಸಿದಲ್ಲಿ ಸಾವಿನ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆ ಇದೆ. ಸಾವನ್ನಪ್ಪಿರುವ ಜಾನುವಾರುಗಳಿಗೆ ಸರಕಾರದಿಂದ ಪರಿಹಾರ ಸಿಗಲಿದೆ. ಕರುವಿಗೆ 5 ಸಾವಿರ ರೂ., ಹಸುವಿಗೆ 10 ಸಾವಿರ ರೂ., ಎತ್ತುಗಳಿಗೆ 30 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.

Advertisement

ರೋಗಬಾಧಿತ – ಸಾವನ್ನಪ್ಪಿದ ಹಸುಗಳ ವಿವರ
ತಾಲೂಕು       ಬಾಧಿತ      ಚಿಕಿತ್ಸೆ        ಸಾವು
ಉಡುಪಿ             225            77                 6
ಕಾಪು                 355             33                5
ಬ್ರಹ್ಮಾವರ         1,629         7                  18
ಕುಂದಾಪುರ       409          18                  5
ಬೈಂದೂರು       1,553         17                 16
ಕಾರ್ಕಳ             1,031         10                 9
ಹೆಬ್ರಿ                  1,167          56                15
ಒಟ್ಟು             6,369       218             74

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next