Advertisement

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

11:00 PM Sep 17, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸಕ್ಕೆ ನಮ್ಮ ಸರ್ಕಾರ ಬದ್ಧತೆ ಮುಂದುವರಿಸಿದೆ. ಅದಕ್ಕಾಗಿಯೇ ಪ್ರತಿ ವರ್ಷ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು ರಸ್ತೆ, ನೀರಾವರಿ, ಆರೋಗ್ಯ, ಶಿಕ್ಷಣದ ವಿಕಾಸಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

Advertisement

ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಮಂಗಳವಾರ 371(ಜೆ) ಕಲಂ ದಶಮಾನೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿಂದಿನ ಸರ್ಕಾರದ ಅಶಿಸ್ತು, ಭ್ರಷ್ಟಾಚಾರದಿಂದ ರಾಜ್ಯ ಅಧಃಪತನದತ್ತ ಸಾಗಿತ್ತು. ಬಜೆಟ್‌ನಲ್ಲಿ ಅನುದಾನವನ್ನೂ ಘೋಷಣೆ ಮಾಡದೆ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಸಮ್ಮತಿ ನೀಡಿತ್ತು. ಇಂತಹ ಘಳಿಗೆಯಲ್ಲಿ ಜನಾಶೀರ್ವಾದದಿಂದ ಬಂದ ನಾವು ರಾಜ್ಯವನ್ನು ಪುನಃ ಅಭಿವೃದ್ಧಿಯ ಹಳಿಗೆ ತಂದಿದ್ದೇವೆ. ಆದ್ದರಿಂದ ನಮ್ಮ ಬದ್ಧತೆ ಪ್ರಶ್ನಿಸುವಂತಿಲ್ಲ ಎಂದರು.

ಸಂಪುಟ ಉಪ ಸಮಿತಿ ರಚನೆ:
ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಭಾಗದ ಜನರ ಮತ್ತು ಯುವಕರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಶ್ರೇಯೋಭಿವೃದ್ಧಿಗೆ ಒಟ್ಟು 39,121 ಕೋಟಿ ರೂ. ಮೀಸಲಿಡಲಾಗಿದೆ. ಇದರ ಲಾಭವನ್ನು ಈ ಭಾಗದ ಜನರೂ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಅಕ್ಷರ ಅವಿಷ್ಕಾರ:
ಕಲ್ಯಾಣದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಮಂಡಳಿ 1250 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಅದರಲ್ಲಿ ಅಕ್ಷರ ಅವಿಷ್ಕಾರ ಕಲ್ಯಾಣದಲ್ಲಿ ಹೊಸ ಪರ್ವವನ್ನೇ ಸೃಷ್ಟಿಸಿದೆ. ಮಂಡಳಿಯಿಂದ 2023-24 ಮತ್ತು 2024-25 ಎರಡೂ ವರ್ಷಗಳನ್ನು ಶೈಕ್ಷಣಿಕ ವರ್ಷಗಳೆಂದು ಘೋಷಣೆ ಮಾಡಿದೆ. ಈ ವರ್ಷ 1008 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಎನ್ನುವ ಹೊಸ ಮಾದರಿ ಪ್ರಾರಂಭಿಸಲಾಗಿದೆ. ನಮ್ಮ ನಿರೀಕ್ಷೆ ಮೀರಿ 36,445 ಮಕ್ಕಳು ಪ್ರವೇಶ ಪಡೆದು ದಾಖಲೆ ಬರೆದಿದ್ದಾರೆ. ಅದಕ್ಕಾಗಿ ಹೊಸದಾಗಿ 1353 ಅತಿಥಿ ಶಿಕ್ಷಕರು, 892 ಸಹಾಯಕಿಯರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದರು.

ಮಂಡಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆಜಾದ್‌ ಮಾದರಿ ಶಾಲೆಗಳು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಎಸ್ಸಿ,ಎಸ್ಟಿ ಪಂಗಡಗಳಿಗಾಗಿ 200 ಕೋಟಿ ರೂ.ಗಳಲ್ಲಿ ಮೆಟ್ರಿಕ್‌ ಪೂರ್ವ-ಮೆಟ್ರಿಕ್‌ ನಂತರದ ವಸತಿ ನಿಲಯಗಳ ನಿರ್ಮಾಣ ಮಾಡಲಾಗುತ್ತಿದೆ. ರಾಯಚೂರು, ಯಾದಗಿರಿಯಲ್ಲಿ ನೂತನ ವಿಜ್ಞಾನ ಕೇಂದ್ರ, ತಾರಾಲಯಗಳನ್ನು ಸ್ಥಾಪಿಸಲಾಗುವುದು ಎಂದರು.

Advertisement

ಅಪೌಷ್ಟಿಕತೆಗೆ ಮದ್ದು:
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೆಚ್ಚು. ಆದ್ದರಿಂದ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, 220 ಕೋಟಿ ರೂ. ಗಳ ವಿಶೇಷ ಅನುದಾನದಲ್ಲಿ ಹೊಸ ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗುತ್ತಿದೆ. ಕಲಬುರಗಿಯಲ್ಲಿ 221 ಕೋಟಿ ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಿಎಂ ಹೇಳಿದರು.

ಹೊಸ ಬಸ್‌ ಖರೀದಿ:
ಕಲ್ಯಾಣ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಹೊಸದಾಗಿ 222 ಬಸ್‌ಗಳನ್ನು ಖರೀದಿಸಲು ಕೆಕೆಆರ್‌ಟಿಸಿ ಸಂಸ್ಥೆಗೆ ಕೆಕೆಆರ್‌ಡಿಬಿ 90 ಕೋಟಿ ರೂ. ಅನುದಾನ ಒದಗಿಸಿದೆ. 44 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಸುಮಾರು 8,290 ಕೋಟಿ ವೆಚ್ಚದಲ್ಲಿ 2,283 ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ. ಕಲ್ಯಾಣದಲ್ಲಿ 400 ಸಮುದಾಯ ಶೌಚಾಲಯ, 1100 ಅರಿವು ಕೇಂದ್ರಗಳಿದ್ದು ಇವುಗಳ ಪೈಕಿ 1021 ಗ್ರಂಥಾಲಯಗಳನ್ನು ಡಿಜಿಟಲ್‌ ಗ್ರಂಥಾಲಯಗಳನ್ನಾಗಿ ಮೇಲೆªರ್ಜೆಗೆ ಏರಿಸಲಾಗಿದೆ. ಅರಿವು ಕೇಂದ್ರಗಳಲ್ಲಿ ಒಟ್ಟು 12.33 ಲಕ್ಷ ಮಕ್ಕಳು ನೋಂದಣಿ ಆಗಿರುತ್ತಾರೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ ಪ್ರಗತಿಗೆ ಪೂರಕವಾಗಿದೆ ಎಂದರು.

ಮಹಾತ್ಮ ಗಾಂಧಿ  ನಗರ ವಿಕಾಸ ಯೋಜನೆ 2.0 ಅಡಿ ಕಲಬುರಗಿ ಮತ್ತು ಬಳ್ಳಾರಿ ಪಾಲಿಕೆಗಳಿಗೆ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ತಲಾ 200 ಕೋಟಿ ರೂ. ಒದಗಿಸಲಾಗುತ್ತಿದೆ. 1,685 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲು ಯೋಚಿಸಲಾಗುತ್ತಿದೆ. “ಕಲ್ಯಾಣ ಪಥ’ ಯೋಜನೆ ಅಡಿಯಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ 1,150 ಕಿಮೀ ರಸ್ತೆಗಳನ್ನು ನಿರ್ಮಿಸಲಿದೆ ಎಂದರು.

ಸಿಎಂ ಹೇಳಿದ್ದೇನು?
-ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 36,445 ಮಕ್ಕಳು ಪ್ರವೇಶ
-ಪಪಂ ಸಮುದಾಯದ ಶ್ರೇಯೋಭಿವೃದ್ಧಿಗೆ ಒಟ್ಟು 39,121ಕೋಟಿ ರೂ.
-ಆಸ್ಪತ್ರೆಗಳ ಕಾಮಗಾರಿಗೆ ಪ್ರಸಕ್ತ ವರ್ಷ 75 ಕೋಟಿ ರೂ. ಅನುದಾನ
-1021 ಗ್ರಂಥಾಲಯ ಡಿಜಿಟಲ್‌ ಗ್ರಂಥಾಲಯಗಳಾಗಿ ಮೇಲ್ದರ್ಜೆಗೆ
-222 ಬಸ್‌ ಖರೀದಿಗೆ ಕೆಕೆಆರ್‌ಟಿಸಿ ಸಂಸ್ಥೆಗೆ ಮಂಡಳಿಯಿಂದ 90 ಕೋಟಿ ರೂ.
-ಕಲಬುರಗಿ-ಬಳ್ಳಾರಿ ಪಾಲಿಕೆಗೆ ಮೂಲಸೌಕರ್ಯಕ್ಕೆ ತಲಾ 200 ಕೋಟಿ ಅನುದಾನ

 

Advertisement

Udayavani is now on Telegram. Click here to join our channel and stay updated with the latest news.

Next