ಭೋಪಾಲ್: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಬಳಸಿದ ಅಸ್ತ್ರವನ್ನೇ ಮಧ್ಯಪ್ರದೇಶದಲ್ಲೂ ಕೈ ನಾಯಕತ್ವ ಬಳಸುತ್ತಿದೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ “50% ಸರ್ಕಾರ” ಎಂಬ ಅಭಿಯಾನವನ್ನು ಸೋಮವಾರ ಆರಂಭಿಸಿದೆ. ಶೇ.50ರಷ್ಟು ಕಮಿಷನ್ ಕೊಡಿ ಮತ್ತು ಫೋನ್ನಲ್ಲೇ ಕೆಲಸ ಆಗುವಂತೆ ಮಾಡಿ” ಎಂಬ ಟ್ಯಾಗ್ಲೈನ್ನೊಂದಿಗೆ ಎಲ್ಲೆಡೆ ಪೋಸ್ಟರ್ಗಳನ್ನು ಹಾಕಲು ಕಾಂಗ್ರೆಸ್ ಶುರು ಮಾಡಿದೆ. ಫೋನ್ ಪೇ ಲೋಗೋ, ಕ್ಯೂಆರ್ ಕೋಡ್ ರೀತಿಯಲ್ಲೇ ಈ ಪೋಸ್ಟರ್ ಅನ್ನು ಚಿತ್ರಿಸಲಾಗಿದೆ. ಕ್ಯೂಆರ್ ಕೋಡ್ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರವನ್ನು ಹಾಕಲಾಗಿದೆ.
ಇನ್ನೊಂದೆಡೆ, ತನ್ನ ಹೆಸರು, ಲೋಗೊ ಮತ್ತು ಚಿತ್ರವನ್ನು ಬಳಸಿದಕ್ಕಾಗಿ ಫೋನ್ ಪೇ ಕಂಪನಿಯು ಕಾಂಗ್ರೆಸ್ಗೆ ಸ್ಟಷ್ಟನೆಯನ್ನು ಕೇಳಿದೆ.
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ “40% ಸರ್ಕಾರ” ಮತ್ತು “ಪೇ ಸಿಎಂ” ಎಂಬ ಅಸ್ತ್ರವನ್ನು ಕಾಂಗ್ರೆಸ್ ಬಳಸಿತ್ತು. ಇದೇ ವೇಳೆ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ರೂಪಿಸಿದ್ದ ಗ್ಯಾರೆಂಟಿ ಯೋಜನೆಗಳನ್ನೇ ಮಧ್ಯಪ್ರದೇಶದ ಚುನಾವಣೆಯಲ್ಲೂ ಪರಿಚಯಿಸಲು ಕಾಂಗ್ರೆಸ್ ಮುಂದಾಗಿದೆ.