Advertisement

5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ: ಸಚಿವ ಮುರುಗೇಶ ನಿರಾಣಿ

08:34 PM Oct 16, 2022 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಪಡಿಸಲು ನ.2ರಿಂದ 4ರ ವರೆಗೆ ಮೂರು ದಿನಗಳ ಕಾಲ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ರಾಜ್ಯಕ್ಕೆ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 3ನೇ ಬಾರಿ ಬಂಡವಾಳ ಹೂಡಿಕೆ ಸಮಾವೇಶ ನಡೆಯುತ್ತಿದೆ. ಇದಕ್ಕಾಗಿ ವಿಶ್ವದ ವಿವಿಧ ರಾಷ್ಟ್ರಗಳಿಗೆ ತೆರಳಿ, ಕಂಪೆನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ರಾಜ್ಯಕ್ಕೆ ಆಹ್ವಾನಿಸಲಾಗಿದೆ. ಹಲವು ಬಹುರಾಷ್ಟ್ರೀಯ ಕಂಪೆನಿಗಳು ಭಾಗವಹಿಸಲಿವೆ. ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಂಡು, ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಮುಂದೆ ಬರಲಿರುವ ಕಂಪೆನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯಾದ್ಯಂತ 50 ಸಾವಿರ ಎಕ್ರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದರು.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ 20 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಿದ್ದು, ಉಳಿದ 30 ಸಾವಿರ ಎಕರೆ ಭೂಮಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುತಿಸಲಾಗುತ್ತಿದೆ. ಶಿಕ್ಷಣ ಮತ್ತು ಕೈಗಾರಿಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ರಾಜ್ಯದಲ್ಲಿ ಕೈಗಾರಿಕೆ ಮಿತ್ರವಾಗಿ ರೂಪಿಸುತ್ತಿದ್ದು, ಎಫ್‌ಡಿಐ (ಫಾರಿನ್‌ ಡೈರಕ್ಟ್ ಇನ್ವೆಸ್ಟ್‌ಮೆಂಟ್‌) ಅಡಿಯಲ್ಲಿ ದೇಶಕ್ಕೆ ಬಂದಿರುವ ಒಟ್ಟಾರೆ ಹೂಡಿಕೆಯಲ್ಲಿ ರಾಜ್ಯಕ್ಕೆ ಶೇ.40ರಷ್ಟು ಬಂದಿದೆ. ಹೀಗಾಗಿ ದೇಶದಲ್ಲೇ ರಾಜ್ಯ ನಂ.1 ಇದೆ ಎಂದರು.

ಯತ್ನಾಳ್‌ ನಮ್ಮಣ್ಣ, ಹೀಗಾಗಿ ಬಯ್ಯುತ್ತಾರೆ
ಕಳೆದ ವಾರ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಪರೋಕ್ಷವಾಗಿ ಸಚಿವ ನಿರಾಣಿ ಅವರನ್ನು ಉಲ್ಲೇಖಿಸಿ ಜಿಲ್ಲೆಯಲ್ಲಿ ಒಂದು ಹುಳು ಇದೆ ಎಂದಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ನಿರಾಣಿ, ಅವರು ನಮ್ಮಣ್ಣ ಇದ್ದಂತೆ. ಹೀಗಾಗಿ ಬಯ್ಯುತ್ತಿರುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. 20 ವರ್ಷಗಳಿಂದ ನನ್ನನ್ನು ಬಯ್ಯುತ್ತಿದ್ದು, ನಾನು ಬೆಳೆಯುತ್ತಲೇ ಇದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next