Advertisement

ರಾಜ್ಯದಲ್ಲಿ ಎಚ್‌1ಎನ್‌1ಗೆ 5 ಬಲಿ

02:45 PM Oct 13, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ತಿಂಗಳಿನಿಂದೀಚೆಗೆ ಎಚ್‌1ನ್‌1 ಸೋಂಕಿಗೆ ನಾಲ್ಕು ಮಂದಿ ಮೃತಪಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ಗರ್ಭಿಣಿ ಸೇರಿದಂತೆ ಈವರೆಗೆ ಒಟ್ಟು ಐದು ಮಂದಿ ಸಾವಿಗೀಡಾಗಿರುವುದು ತಡವಾಗಿ ದೃಢಪಟ್ಟಿದೆ. 

Advertisement

ತೀವ್ರ ಜ್ವರದಿಂದ ಮೃತಪಟ್ಟವರ ಪೈಕಿ ಐದು ಮಂದಿ ಎಚ್‌1ಎನ್‌1 ಸೋಂಕಿಗೆ ಬಲಿಯಾಗಿರುವುದನ್ನು ತಜ್ಞರ ಸಮಿತಿ ದೃಢಪಡಿಸಿದೆ. ಅದರಂತೆ ಕಳೆದ ಮಾರ್ಚ್‌ನಲ್ಲಿ ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಗರ್ಭಿಣಿ ಕಾವ್ಯಾ (24) ಅವರಿಗೂ ಎಚ್‌1ಎನ್‌1 ಸೋಂಕು ತಗುಲಿರುವುದು ದೃಢಪಟ್ಟಿದೆ.

ಹಾಗೆಯೆ, ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಅಮೀನಾಬಿ (45), ಗೋವಿಂದನ್‌ (58), ದೊಡ್ಡಬಳ್ಳಾಪುರ ನಿವಾಸಿ ಗಂಗರತ್ನಮ್ಮ (57), ರಾಮನಗರದ ಪುಟ್ಟಮ್ಮ (60) ಅವರು
ಇದೇ ಸೋಂಕಿನಿಂದಲೇ ಮೃತಪಟ್ಟಿರುವುದು ಸ್ಪಷ್ಟವಾಗಿದೆ. ತೀವ್ರ ಜ್ವರದಿಂದ ಮೃತಪಟ್ಟವರು ಸೇರಿದಂತೆ ಎಚ್‌1ಎನ್‌1 ಸೋಂಕು ತಗುಲಿದ ಶಂಕಿತ ಪ್ರಕರಣಗಳಲ್ಲಿ ಮೃತರ ರಕ್ತದ ಮಾದರಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ತಜ್ಞರ ಸಮಿತಿಯು ಪರಿಶೀಲನೆ ನಡೆಸಿ ಸೋಂಕಿನಿಂದ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದು, ಶುಕ್ರವಾರ ಇಲಾಖೆಗೆ ವರದಿ ಸಲ್ಲಿಸಿತ್ತು ಎಂದು ಮೂಲಗಳು ತಿಳಿಸಿವೆ.

ರಕ್ತದೊತ್ತಡ, ಮಧುಮೇಹ, ಹೃದ್ರೋಗಿಗಳು, ಗರ್ಭಿಣಿಯರಿಗೆ ಎಚ್‌1ಎನ್‌1 ಸೋಂಕು ತಗುಲಿದರೆ ತೀವ್ರತೆ ಹೆಚ್ಚಿರುತ್ತದೆ. ಸಂಪೂರ್ಣ ಗುಣಮುಖರಾಗಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಇದೇ ಸೋಂಕಿನಿಂದ ಮೃತಪಟ್ಟ ಐದು ಮಂದಿ ಪೈಕಿ ನಾಲ್ಕು ಮಂದಿಗೆ ರಕ್ತದೊತ್ತಡ ಹಾಗೂ ಮಧುಮೇಹವಿರುವುದು ಗೊತ್ತಾಗಿದೆ. ತುಮಕೂರಿನ ಗರ್ಭಿಣಿ ಕಾವ್ಯಾ ಅವರು, ಎಚ್‌ 1ಎನ್‌1 ಸೋಂಕಿನಿಂದಾಗಿ ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ಗೊತ್ತಾಗಿದೆ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವರಾಜ್‌ ಸಜ್ಜನ್‌ ಶೆಟ್ಟಿ ತಿಳಿಸಿದ್ದಾರೆ. 

ಎಚ್‌1ಎನ್‌1 ಸೋಂಕು ಸೆಪ್ಟೆಂಬರ್‌ನಿಂದ ಉಲ್ಬಣವಾಗಿದ್ದು, ರಾಜ್ಯದಲ್ಲಿ ಈವರೆಗೂ ಒಟ್ಟು 456 ಮಂದಿಗೆ ಕಾಣಿಸಿಕೊಂಡಿದೆ. ಹೀಗಾಗಿ, ರೋಗದ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನವಿ
ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next