Advertisement

ಜಮ್ಮು: ಮತ್ತೆ ಸಿಆರ್‌ಪಿಎಫ್ ಗುರಿ; ಐವರು ಹುತಾತ್ಮ

02:20 AM Jun 13, 2019 | Team Udayavani |

ಶ್ರೀನಗರ/ಹೊಸದಿಲ್ಲಿ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯ ನೋವು ಆರುವ ಮುನ್ನ ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ ನಡೆದಿದೆ. ಅನಂತನಾಗ್‌ ಜಿಲ್ಲೆಯ ಕೆ.ಪಿ. ರೋಡ್‌ನ‌ಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಿಆರ್‌ಪಿಎಫ್ನ ಐವರು ಯೋಧರು ಹುತಾತ್ಮರಾಗಿದ್ದಾರೆ.

Advertisement

ಮೋಟರ್‌ಸೈಕಲ್ನಲ್ಲಿ ಆಗಮಿಸಿದ ಇಬ್ಬರು ಉಗ್ರರು ಗಸ್ತು ತಿರುಗುವ ಕರ್ತವ್ಯದಲ್ಲಿ ನಿರತರಾಗಿದ್ದ ಯೋಧರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಜತೆಗೆ ಗ್ರೆನೇಡ್‌ಗಳನ್ನೂ ಎಸೆದು ಪರಾರಿಯಾಗಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ. ಅನಂತನಾಗ್‌ ಠಾಣೆಯ ಠಾಣಾಧಿಕಾರಿ ಅರ್ಶದ್‌ ಅಹ್ಮದ್‌ ಗಾಯಗೊಂಡವರಲ್ಲಿ ಸೇರಿದ್ದಾರೆ.

ಈ ಘಟನೆಯ ಬಳಿಕ ಪೊಲೀಸರು, ಸಿಆರ್‌ಪಿಎಫ್ ಮತ್ತು ಇತರ ಸೇನಾ ಸಿಬಂದಿ ತತ್‌ಕ್ಷಣ ಶೋಧ ಕಾರ್ಯ ಆರಂಭಿಸಿದರು. ಈ ಸಂದರ್ಭ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರ ಪೈಕಿ ಒಬ್ಬನನ್ನು ಕೊಂದು ಹಾಕಲಾಗಿದೆ. ಇನ್ನೊಬ್ಬ ಉಗ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಅಲ್ ಉಮರ್‌ ಮುಜಾಹಿದ್ದೀನ್‌ ಎಂಬ ಸಂಘಟನೆ ಕೃತ್ಯದ ಹೊಣೆ ಹೊತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next