Advertisement

4.50 ಕೋಟಿ ರೂ. ಮಿಗತೆ ಬಜೆಟ್‌ 

03:18 PM Feb 01, 2018 | Team Udayavani |

ಚಿಕ್ಕಮಗಳೂರು: 2018-19ನೇ ಸಾಲಿಗೆ 4.50 ಕೋಟಿ ರೂ. ಉಳಿತಾಯದ ಆಯವ್ಯಯವನ್ನು ನಗರಸಭೆ ಅಧ್ಯಕ್ಷ ಶಿಲ್ಪಾ
ರಾಜಶೇಖರ್‌ ಮಂಡಿಸಿ ಸರ್ವಾನುಮತದ ಅನುಮೋದನೆ ಪಡೆದುಕೊಂಡರು.

Advertisement

ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ನಗರಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌ ಬಜೆಟ್‌ನ್ನು ಮಂಡಿಸಿದರು. ಪ್ರಾರಂಭದ ಶಿಲ್ಕು 1640.17 ಲಕ್ಷ, ಆದಾಯ 6537.50 ಲಕ್ಷ ರೂ. ನಿರೀಕ್ಷಿಸಲಾಗಿದ್ದು, ಒಟ್ಟು ಆದಾಯ 8177.67 ಲಕ್ಷ. ಇದರಲ್ಲಿ 7727 ಲಕ್ಷ ವೆಚ್ಚಕ್ಕೆ ನಿಗದಿಗೊಳಿಸಲಾಗಿದೆ. ಆಸ್ತಿ ತೆರಿಗೆ, ಕಟ್ಟಡ ರಚನಾ ಪರವಾನಗಿ ಶುಲ್ಕ, ವ್ಯಾಪಾರ ಪರವಾನಗಿ ಶುಲ್ಕ,
ಯುಜಿಡಿ ಸಂಪರ್ಕಕ್ಕಾಗಿ ಸೇವಾ ಶುಲ್ಕ, ರಸ್ತೆ ಕಟ್ಟಿಂಗ್‌ ಚಾರ್ಜ್‌, ಪಾರ್ಕಿಂಗ್‌ ಶುಲ್ಕ, ನಲ್ಲಿ ಸಂಪರ್ಕ ಶುಲ್ಕ, ಜಾಹೀರಾತು ಎಲ್ಲಾ ರೀತಿಯ ಎನ್‌ಒಸಿ ದೃಢೀಕರಣ, ಮೊಬೈಲ್‌ ಟವರ್‌ಗಳನ್ನು ಸರ್ವೆ ಮಾಡಿ ವಾರ್ಷಿಕ ದರ ನಿಗ ಪಡಿಸುವ ಮೂಲಕ ಆದಾಯದ ಮೂಲವನ್ನು ಶೇ.20ರಷ್ಟು ಹೆಚ್ಚಿಸಲು ಬಜೆಟ್‌ ಕ್ರಮ ವಹಿಸಿದೆ ಎಂದರು.

2017-18ನೇ ಸಾಲಿನ ಆಯವ್ಯಯದಲ್ಲಿ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಶೇ.65ರಷ್ಟು
ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇನ್ನುಳಿದವು ಪ್ರಗತಿಯಲ್ಲಿದೆ ಎಂದು ಹೇಳಿದರು. ಆಸ್ತಿ ತೆರಿಗೆಯಿಂದ 800 ಲಕ್ಷ, ಕಟ್ಟಡ ಪರವಾನಗಿ ಬಾಬ್ತು 50 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ 170 ಲಕ್ಷ, ಪಾರ್ಕಿಂಗ್‌ ಶುಲ್ಕ 40 ಲಕ್ಷ, ಖಾತಾ ಬದಲಾವಣೆ 40 ಲಕ್ಷ, ಎಸ್‌ಎಫ್‌ಸಿ ವೇತನ ನಿಧಿ ಅನುದಾನ 605 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ  600 ಲಕ್ಷ ಒಟ್ಟು 3,526 ಲಕ್ಷ ರೂ. ಅನುದಾನ
ನಿರೀಕ್ಷಿಸಲಾಗಿದೆ.

ಎಂ.ಜಿ.ರಸ್ತೆ, ಐ.ಜಿ.ರಸ್ತೆ ಹಾಗೂ ಅಂಬೇಡ್ಕರ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ಶುಲ್ಕವನ್ನು ವಿಧಿಸಲು ಆಲೋಚಿಸಲಾಗಿದ್ದು, ಇದರಲ್ಲಿ 40 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ನಗರಸಭೆ ಬಂಡವಾಳ ಖಾತೆಯಲ್ಲಿ ನಗರಸಭೆ ನಿವೇಶನಗಳ ಹರಾಜು ಮೂಲಕ ಮಾರಾಟದಿಂದ 200 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರ ಶ್ರೇಯೋಭಿವೃದ್ಧಿಗಾಗಿ 132 ಲಕ್ಷ ರೂ., ಇತರೆ ಬಡಜನರಿಗಾಗಿ 40 ಲಕ್ಷ, ವಿಶೇಷ ವಿಕಲಚೇತನರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 16.50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ, ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಗಳಿಗೆ ಸಹಾಯಧನ, ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ನೀಡಲು ಉದ್ದೇಶಿಸಲಾಗಿದೆ. 

ನಗರಸಭಾ ನಿಧಿ, ಎಸ್‌.ಎಫ್‌.ಸಿ., 14ನೇ ಹಣಕಾಸು ಯೋಜನೆಗಳಲ್ಲಿ ಶೇ.65 ರಷ್ಟು ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲು ಹಾಗೂ ಉಳಿಕೆ ಕಾಮಗಾರಿ ನಿರ್ವಹಿಸಲು 600 ಲಕ್ಷ ರೂ. ಮೀಸಲಿಡಲಾಗಿದೆ.  ಮನೆ, ಮನೆ ಕಸ ಸಂಗ್ರಹಣೆ ಮಾಡಲು 1 ಹಿಟಾಚಿ, 1 ಕಂಪ್ಯಾಕ್ಟರ್‌, 16 ಆಟೋ ಟಿಪ್ಪರ್‌ಗಳು ಹಾಗೂ ಹೆಚ್ಚಿನ ಕಸ ವಿಂಗಡಣೆ ಮಾಡಲು 1 ಸೆಗ್ರಿಗೇಷನ್‌ ಯಂತ್ರ ಖರೀದಿಸಲು ಆಯೋಜಿಸಲಾಗಿದ್ದು, ಮೂಲದಲ್ಲೇ ಕಸ ವಿಂಗಡಣೆ ಮಾಡಲು ಪ್ರತಿ ಮನೆಗೆ ಹಸಿರು ಮತ್ತು ಹಳದಿ ಬಣ್ಣದ ಎರಡು ಟಬ್‌ ನೀಡಲು ಯೋಜನೆ ರೂಪಿಸಲಾಗಿದೆ. 

Advertisement

ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಅಡ್ಡರಸ್ತೆಗಳಿಗೆ ನಾಮಫಲಕ ಹಾಕುವುದು, ಹಾಳಾಗಿರುವ ರಸ್ತೆಗಳ ಗುಂಡಿ ಮುಚ್ಚುವುದು,
ನಗರಸಭಾ ವ್ಯಾಪ್ತಿಯ ಹೊರವಲಯಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪಾವತಿಸಿ  ಉಪಯೋಗಿಸುವ ಶೌಚಾಲಯಗಳನ್ನು
ನಿರ್ಮಿಸುವುದು, ಎಂ.ಜಿ.ರಸ್ತೆಯ ಗುರುತಿಸಿದ ಎರಡು ಬದಿಗಳಲ್ಲಿ ಹೂಕುಂಡ ಮತ್ತು ಡಸ್ಟ್‌ಬಿನ್‌ಗಳನ್ನು ಇಡಲು ಯೋಜಿಸಲಾಗಿದೆ.

ನಗರಸಭಾ ವ್ಯಾಪ್ತಿಯಲ್ಲಿ ಆಧುನಿಕ ಚಿತಾಗಾರ ಮತ್ತು ಕಸಾಯಿಖಾನೆ ನಿರ್ಮಾಣ ಮಾಡಲು, ನಗರದ ವಸತಿ ರಹಿತರಿಗೆ
ರಾತ್ರಿ ತಂಗುದಾಣಗಳನ್ನು ನಿರ್ಮಿಸಲು, ಎಲ್ಲೆಂದರಲ್ಲಿ ತಿಂಡಿ ಗಾಡಿಗಳನ್ನು ಇಡುವುದನ್ನು ತಪ್ಪಿಸಲು ನಗರದ ನಾಲ್ಕೂ
ಭಾಗಗಳಲ್ಲಿ ಫುಡ್‌ ಕೋರ್ಟ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷರು ಘೋಷಿಸಿದರು. ಕರಡು ಬಜೆಟ್‌ ಮೇಲೆ ಚರ್ಚೆ ನಡೆಸಿದ ಸದಸ್ಯರು ನಂತರ ಸರ್ವಾನುಮತದಿಂದ ಅಂಗೀಕಾರ ನೀಡಿದರು. ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ್‌ ರಾವ್‌ ಹಾಗೂ ಪೌರಾಯುಕ್ತೆ ತುಷಾರಮಣಿ, ಶಾಸಕ ಸಿ.ಟಿ.ರವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next