Advertisement

ರೈತ ಬಂಡಾಯದ “ಮೇಳಿ ಕಾಳಗ’ಕ್ಕೆ  41 ವರ್ಷ

08:22 PM Jul 21, 2021 | Team Udayavani |

ವರದಿ : ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

ನರಗುಂದ: 1980ರಲ್ಲಿ “ಮೇಳಿ ಕಾಳಗ’ ಎಂದೇ ಪ್ರತೀತಿ ಪಡೆದ ನರಗುಂದ ರೈತ ಬಂಡಾಯಕ್ಕೆ ಜುಲೈ 21 ಕ್ಕೆ 41 ವರ್ಷ ಗತಿಸಿದೆ. ರೈತ ಕುಲದ ಏಳ್ಗೆಗೆ ನೆತ್ತರು ಹರಿಸಿದ ರೈತ ಬಂಡಾಯದ ನೆಲದಲ್ಲಿ ಬುಧವಾರ ರೈತ ಹುತಾತ್ಮ ದಿನ ಆಚರಿಸಲಾಗಿದೆ.

ನೆತ್ತರು ಹರಿಸಿದ ಆ ದಿನಗಳು: 1980ರಲ್ಲಿ ನವಿಲುತೀರ್ಥ ಜಲಾಶಯದಿಂದ ಕಾಲುವೆ ನೀರು ರೈತರ ಭೂಮಿಗೆ ದೊರಕದಿದ್ದರೂ ಅಂದಿನ ಗುಂಡೂರಾವ್‌ ಸರ್ಕಾರ ಬೆಟರ್‌ ಮೆಂಟ್‌ ಲೇವಿ(ನೀರಿನ ಕರ ಆಕರಣೆ) ಜಾರಿಗೊಳಿಸಿತು.ನೀರು ಸಿಗದಿದ್ದರೂ ಕರ ಏಕೆ ಕಟ್ಟಬೇಕು? ಎಂಬ ತಾರ್ಕಿಕ ನಿಲುವು ರೈತರ ಚಳವಳಿಗೆ ನಾಂದಿ ಹಾಡಿತು. ಅತ್ತ ನವಲಗುಂದದಲ್ಲೂ ಚಳವಳಿ ಶುರುವಾಗಿ, 1980ರ ಜು.21ರಂದು ನರಗುಂದದಲ್ಲಿ ಅಂದಿನ ತಹಶೀಲ್ದಾರರು ಕಚೇರಿ ಪ್ರವೇಶಕ್ಕೆ ನಿರಾಕರಿಸಿದ ರೈತರನ್ನು ಲೆಕ್ಕಿಸದೇ ಕಚೇರಿ ಪ್ರವೇಶ ಮಾಡಿದ್ದೇ ಬಂಡಾಯಕ್ಕೆ ನಾಂದಿಯಾಯಿತು. ಇದು ರೈತರ ಸಹನೆ ಕೆರಳಿಸಿತ್ತು ಎಂಬ ಹಿನ್ನೆಲೆ ರೈತ ಬಂಡಾಯಕ್ಕಿದೆ. “ಬಡವನ ಕೋಪ ದವಡೆಗೆ ಮೂಲ’ ಎಂಬಂತೆ ಮೇಳಿ(ಕೃಷಿ ಪರಿಕರ) ಹಿಡಿದು ಕುಳಿತಿದ್ದ ರೈತರ ಆಕ್ರೋಶ ತಾರಕಕ್ಕೇರಿದಾಗ ಪೊಲೀಸರ ಗುಂಡಿಗೆ ಚಿಕ್ಕನರಗುಂದ ರೈತ ಈರಪ್ಪ ಕಡ್ಲಿಕೊಪ್ಪ, ನವಲಗುಂದಲ್ಲಿ ಅಳಗವಾಡಿ ರೈತ ಬಸಪ್ಪ ಲಕ್ಕುಂಡಿ ಬಲಿಯಾದರು. ಇದೇ ವೇಳೆ ಓರ್ವ ಪೊಲೀಸ್‌ ಅಧಿಕಾರಿ ಸೇರಿ 4 ಮಂದಿ ಪೊಲೀಸರು ಹತರಾಗಿದ್ದು ಬಂಡಾಯದ ಹಾದಿಯಲ್ಲಿ ಅಚ್ಚೊತ್ತಿದೆ.

ತೀರದ ಗೋಳು: ರೈತ ಬಂಡಾಯದ ನೆಲದಲ್ಲೇ 6 ವರ್ಷದಿಂದ ಮಹದಾಯಿ ಹೋರಾಟ ಹುಟ್ಟಿಕೊಂಡಿದೆ. 2015ರ ಜು.16ರಂದು ಮಹದಾಯಿ ಮತ್ತು ಕಳಸಾ-ಬಂಡೂರಿ ಜೀವಜಲಕ್ಕಾಗಿ ನಡೆಯುತ್ತಿರುವ ಹೋರಾಟ 7ನೇ ವರ್ಷಕ್ಕೆ ಕಾಲಿಟ್ಟಿದೆ. ಜನಾಂದೋಲನ ಸ್ವರೂಪ ಪಡೆದು, ದೇಶದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದು ವಿಶ್ವ ದಾಖಲೆ ಸೃಷ್ಟಿಸಿದ ಹೋರಾಟ ಸರ್ಕಾರಗಳ ಅಸಡ್ಡೆ ಧೋರಣೆಗೆ ನಿದರ್ಶನವಾಗಿದೆ. ಸುಧಾರಿಸದ ವೀರಗಲ್ಲು: ಈ ನೆಲದ ಹಲವಾರು ನಾಯಕರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಅಧಿ ಕಾರದ ಚುಕ್ಕಾಣಿ ಹಿಡಿದರೂ ಹೆದ್ದಾರಿ ಬದಿಗಿರುವ ಹುತಾತ್ಮ ರೈತನ ವೀರಗಲ್ಲು ಮಾತ್ರ ಸುಧಾರಣೆ ಕಂಡಿಲ್ಲ. ಇಲ್ಲಿ ರೈತ ಸ್ಮಾರಕ ಭವನ ನಿರ್ಮಿಸಬೇಕೆಂಬ ರೈತರ ಕೂಗು ಇಂದಿಗೂ ಈಡೇರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next