Advertisement

Fraud Case ಸೈಬರ್‌ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ 4.80 ಲಕ್ಷ ರೂ. ವಂಚನೆ

12:38 AM Aug 23, 2024 | Team Udayavani |

ಕಾಪು: ಸಾಫ್ಟ್ ವೇರ್‌ ಎಂಜಿನಿಯರ್‌ ಯುವತಿಗೆ ಮುಂಬಯಿ ಸೈಬರ್‌ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಆಕೆಯ ಖಾತೆಯಿಂದ ಮೂರು ಗಂಟೆಯ ಅವಧಿಯೊಳಗೆ 4.80 ಲಕ್ಷ ರೂ. ನಗದು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಕಾಪು ಕೊಪ್ಪಲಂಗಡಿ ನಿವಾಸಿಯಾಗಿರುವ ಯುವತಿ ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ಕರ್ತವ್ಯದಲ್ಲಿರುವಾಗ ಆ. 21ರಂದು 9259996764 ನಂಬರ್‌ನಿಂದ ಮುಂಬಯಿ ಸೈಬರ್‌ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರು ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ನಿಷೇಧಿತ ಡ್ರಗ್ಸ್‌ ಇರುವುದಾಗಿ ತಿಳಿಸಿ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಅನಂತರ ಮತ್ತೋರ್ವರಿಗೆ ಕರೆ ಕನೆಕ್ಟ್ ಮಾಡಿದ್ದರು.

ಈ ಸಂದರ್ಭ ಮತ್ತೊಬ್ಬ ಮಹಿಳೆ ಮಾತನಾಡಿ, ನಾನು ನಾರ್ಕೋಟಿಕ್‌ ಡ್ರಗ್‌ ಡಿಪಾರ್ಟ್‌ಮೆಂಟ್‌ನ ಪೊಲೀಸ್‌ ಅಧಿಕಾರಿಯಾಗಿದ್ದು, ವಿವರಕ್ಕಾಗಿ ಟೆಲಿಗ್ರಾಂ ಆ್ಯಪ್‌ ಅನ್ನು ಓಪನ್‌ ಮಾಡುವಂತೆ ತಿಳಿಸಿದ್ದಳು. ಆಗ ಆ್ಯಪ್‌ ಇಲ್ಲವೆಂದು ಹೇಳಿದ್ದಕ್ಕೆ ಆ್ಯಪ್‌ ಡೌನ್‌ಲೋಡ್‌ ಮಾಡಿಸಿದ್ದರು. ಬಳಿಕ ಮಹಿಳಾ ಪೊಲೀಸ್‌ ಅಧಿಕಾರಿಯ ಪ್ರೊಪೈಲ್‌ ಇರುವ ಐಡಿಯೊಂದನ್ನು ಕಳುಹಿಸಿ ನೀವು ಕೊರಿಯರ್‌ ಕಳುಹಿಸಿರುವ ಬಗ್ಗೆ ನಮಗೆ ತನಿಖೆ ಮಾಡುವುದಕ್ಕಿದೆ. ಕರೆ ಕಟ್‌ ಮಾಡಬಾರದೆಂದು ಆದೇಶಿಸಿದ್ದರು. ಅವರ ಬೆದರಿಕೆಗೆ ಹೆದರಿದ ಯುವತಿ ಟೆಲಿಗ್ರಾಂ ಆ್ಯಪ್‌ ಮೂಲಕ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಹಂಚಿಕೊಂಡಿದ್ದರು. ಅವರು ಪೊಲೀಸ್‌ ಇಲಾಖೆಯ ತನಿಖೆಯ ಬಗೆಗಿನ ವಿವರಗಳನ್ನು ಪಿಡಿಎಫ್‌ ಫೈಲ್‌ ಮೂಲಕ ಕಳುಹಿಸಿಕೊಟ್ಟಿದ್ದರು.

ಅನಂತರ ಮತ್ತೂಬ್ಬ ವ್ಯಕ್ತಿಯ ಫೋಟೋ ತೋರಿಸಿ, ಈತ ನಿಮ್ಮ ಐಡಿ ಬಳಸಿ, ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆದು ವಂಚಿಸುತ್ತಿದ್ದಾನೆ. ನಿಮಗೆ ಅವರ ಪರಿಚಯವಿದೆಯೇ ಎಂದು ಪ್ರಶ್ನಿಸಿದ್ದರು. ಪರಿಚಯವಿಲ್ಲವೆಂದು ತಿಳಿಸಿದಾಗ ಆಕೆ ಮತ್ತೋರ್ವ ಅಧಿಕಾರಿಗೆ ಫೋನ್‌ ಕೊಟ್ಟಿದ್ದು, ಆತ ಪಾರ್ಸೆಲ್‌ ಕಳುಹಿಸಿದ ಬಗ್ಗೆ ತನಿಖೆಗಾಗಿ ಬ್ಯಾಂಕ್‌ ಖಾತೆ ಪರಿಶೀಲಿಸಬೇಕು. ಅದಕ್ಕೆ ಆರ್‌ಬಿಐಗೆ ಖಾತೆ ವಿವರ ಕಳುಹಿಸಿಕೊಡಬೇಕಿದೆ. ನಿಮ್ಮ ಖಾತೆಯಿಂದ ಹಣ ರವಾನೆಯಾಗುತ್ತದೆಯೇ ಎಂದು ಪರಿಶೀಲಿಸಬೇಕಿದೆ ಎಂದು ಹೇಳಿ ಒಂದು ಖಾತೆಯನ್ನು ನೀಡಿದ್ದು ಅದಕ್ಕೆ 2 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಆ ಬಳಿಕ ಮತ್ತೂಂದು ಖಾತೆ ನೀಡಿ ಅದಕ್ಕೆ ಎರಡು ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದರು. ಮತ್ತೆ ಖಾತೆಯಲ್ಲಿ 80 ಸಾವಿರ ಉಳಿದಿದ್ದು, ಅದನ್ನು ಯುಪಿಐ ಐಡಿ ನೀಡಿ ವರ್ಗಾಯಿಸಿಕೊಂಡಿದ್ದರು.

ಖಾತೆಯಲ್ಲಿದ್ದ ಹಣ ಖಾಲಿಯಾದ ಬಳಿಕ ಐಸಿಐಸಿಐ ಆ್ಯಪ್‌ನಿಂದ ಪ್ರಿ ಅಪ್ರೂವ್‌ ಸಾಲ ಮಾಡುವಂತೆ ತಿಳಿಸಿದ್ದು, ಅದರಂತೆ ಆ್ಯಪ್‌ ಡೌನ್‌ಲೋಡ್‌ ಮಾಡಿದಾಗ 4,29,616 ರೂ. ಸಾಲ ಮಂಜೂರಾಗಿರುವ ಬಗ್ಗೆ ಮೆಸೆಜ್‌ ಕಳುಹಿಸಿದ್ದರು. ಅದರ ವಿವರವನ್ನು ಟೆಲಿಗ್ರಾಂ ಆ್ಯಪ್‌ ಮೂಲಕ ಪಡೆದುಕೊಂಡಿದ್ದು, ಅದರಲ್ಲಿ 1 ಲಕ್ಷ ರೂ. ಹಣವನ್ನು ಬ್ಯಾಂಕ್‌ ಆಫ್‌ ಬರೋಡಾ ಖಾತೆಗೆ ರವಾನಿಸುವಂತೆ ತಿಳಿಸಿದ್ದರು. ಆ ಸಂದರ್ಭದಲ್ಲಿ ಬ್ಯಾಂಕ್‌ ಆಫ್‌ ಬರೋಡಾ ಖಾತೆಯ ವಿವರ ಇಲ್ಲದಿದ್ದ ಕಾರಣ ಹಣ ವರ್ಗಾಯಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಅವರು ಐಸಿಐಸಿಐ ಬ್ಯಾಂಕ್‌ನ ಟೋಲ್‌ ಫ್ರೀಗೆ ಕರೆ ಮಾಡಿ ದೂರು ನೀಡಲು ತಿಳಿಸಿದ್ದರು. ಅವರ ಸೂಚನೆಯಂತೆ ಕರೆ ಮಾಡುತ್ತಿದ್ದಾಗ ಮಾಹಿತಿ ಪಡೆದುಕೊಂಡ ಸ್ನೇಹಿತರೊಬ್ಬರು ಇದು ಮೋಸದ ಜಾಲ, ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಯುವತಿಯನ್ನು ಎಚ್ಚರಿಸಿದರು.ಅದೇ ವೇಳೆ ಹಿಂದೆ ಸೈಬರ್‌ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೂ ಕರೆ ಮಾಡಿದ್ದು, ನಾನು ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಯುವತಿ ಹೇಳಿದಾಗ ಕರೆ ಕಟ್‌ ಮಾಡಿದ್ದರು. ಮಾತ್ರವಲ್ಲದೇ ಟೆಲಿಗ್ರಾಂ ಮೂಲಕ ಕಳುಹಿಸಿದ್ದ ಮಾಹಿತಿಗಳೆಲ್ಲವನ್ನೂ ಡಿಲೀಟ್‌ ಮಾಡಿದ್ದರು.

Advertisement

ಪೊಲೀಸರಿಗೆ ದೂರು
ಆ. 22ರಂದು ಒಟ್ಟು ಪ್ರಕರಣ ಮತ್ತು ವಂಚನೆಯ ಬಗ್ಗೆ ವಂಚನೆಗೊಳಗಾದ ಯುವತಿ ನೀಡಿದ ಮಾಹಿತಿಯಂತೆ ಕಾಪು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ದೂರು ಪಡೆಯಲು ವಿಳಂಬ?
ಆ. 21ರಂದು ಬೆಳಗ್ಗೆ 11.30ರಿಂದ ಅಪರಾಹ್ನ 2.30ರ ನಡುವಿನ ಮೂರು ಗಂಟೆಯ ಅವಧಿಯೊಳಗೆ ಸೈಬರ್‌ ವಂಚಕರಿಂದ ವಂಚನೆಗೊಳಗಾದ ಯುವತಿ ಸ್ಥಳೀಯ ಪಾಂಡೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಲು ತೆರಳಿದ್ದರು. ಆಗ ಪೊಲೀಸರು ಸಂಜೆ 4.30ಕ್ಕೆ ಬರುವಂತೆ ತಿಳಿಸಿದ್ದರು. ಅಲ್ಲಿಂದ ಐಸಿಐಸಿಐ ಬ್ಯಾಂಕ್‌ಗೆ ತೆರಳಿ ತನ್ನ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಬ್ಯಾಂಕ್‌ ಸಿಬಂದಿ 1930ಗೆ ಕರೆ ಮಾಡಿ ದೂರು ನೀಡುವಂತೆ ತಿಳಿಸಿದ್ದರು. ಸೈಬರ್‌ ಕ್ರೈಂನವರು ತುರ್ತು ಸ್ಪಂದಿಸಿದ ಪರಿಣಾಮ 1.50 ಲಕ್ಷ ರೂ. ಹಣವನ್ನು ತಡೆಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಲದ ಹಣ ಉಳಿಸಿಕೊಂಡರು
ಲೋನ್‌ ಆ್ಯಪ್‌ ತೆರೆದು ಅದರ ಮೂಲಕ ಪಡೆದಿದ್ದ ಸಾಲವನ್ನೂ ಸೈಬರ್‌ ವಂಚಕರು ವರ್ಗಾಯಿಸುವ ಆಲೋಚನೆ ಹೊಂದಿದ್ದರು. ಆದರೆ ಅದು ತತ್‌ಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಯುವತಿ ಎಚ್ಚೆತ್ತುಕೊಂಡು ಬ್ಯಾಂಕ್‌ಗೆ ಹೋಗಿ ತನ್ನ ಖಾತೆಗೆ ಬಂದಿದ್ದ ಹಣವನ್ನು ತಂದೆಯ ಖಾತೆಗೆ ವರ್ಗಾಯಿಸಿ ತನ್ನ ಖಾತೆಯಲ್ಲಿ ಸ್ಥಗಿತಗೊಳಿಸಿದ್ದರಿಂದ ಸಾಲದ ಹಣ ಉಳಿದುಕೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next