Advertisement

363 ಮಂದಿಗೆ ಸಿಕ್ತು ಮನೆ ಹಕ್ಕುಪತ್ರ

12:12 PM Jun 24, 2017 | |

ದಾವಣಗೆರೆ: ಅನಧಿಕೃತ ಮನೆಗಳ ಸಕ್ರಮೀಕರಣ ಸಂಬಂಧ ಭೂ ಕಂದಾಯ ಕಾಯ್ದೆಯಡಿಯಲ್ಲಿ ರಚಿಸಲಾದ ನಿಯಮಗಳ ಅ ಧಿಸೂಚನೆ ಪ್ರಕಾರ ದಾವಣಗೆರೆ ತಾಲೂಕಿನ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಾಸದ ಮನೆಗಳ 363 ಅರ್ಹ ಫಲಾನುಭವಿಗಳಿಗೆ ಶುಕ್ರವಾರ ಬಗರ್‌ ಹುಕುಂ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ, ಶಾಸಕ ಶಿವಮೂರ್ತಿ ಹಕ್ಕುಪತ್ರ ವಿತರಿಸಿದರು. 

Advertisement

ಚಟ್ಟೋಬನಹಳ್ಳಿಯ ಸರ್ವೇ ನಂ 33 24/2ರಲ್ಲಿ ಒಟ್ಟು 87 ಫಲಾನುಭವಿಗಳು, ನರಗನಹಳ್ಳಿ ಸರ್ವೇ ನಂ. 280 ರಲ್ಲಿ 10, ಮಂಡಲೂರು ಸರ್ವೇ ನಂ 90/ಪಿ1 ರಲ್ಲಿ 41, ಲೋಕಿಕೆರೆ ಗ್ರಾಮದ ಸರ್ವೇ ನಂ. 246 ರಲ್ಲಿ 31, 271 ರಲ್ಲಿ 07, ದೊಡ್ಡರಂಗವ್ವನಹಳ್ಳಿಯ ಸರ್ವೇ ನಂ. 26 ರಲ್ಲಿ 06, ಈಚಗಟ್ಟದ ಸರ್ವೇ ನಂ. 25 ರಲ್ಲಿ 35, ಬುಳ್ಳಾಪುರದ ಸರ್ವೇ ನಂ. 19/2 ರಲ್ಲಿ 139 ಮತ್ತು ಸರ್ವೇ ನಂ. 23 ರಲ್ಲಿ 06 ಹಾಗೂ ಅತ್ತಿಗೆರೆ ಸರ್ವೇ ನಂ. 49/ಪಿ ರಲ್ಲಿ ಓರ್ವ ಫಲಾನುಭವಿ ಸೇರಿದಂತೆ ಒಟ್ಟು ತಾಲೂಕಿನ 363 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. 

ಹಾಲವರ್ತಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದ ಗಂಗಮ್ಮ ಎಂಬುವರಿಗೆ ಸರ್ವೇ ನಂ. 55 ರಲ್ಲಿ 2 ಎಕರೆ, ಚಂದ್ರಪ್ಪ 2 ಎಕರೆ, ಚಾಟಿ ರೇವಣಸಿದ್ದಪ್ಪ ಎಂಬುವರಿಗೆ 1.30 ಎಕರೆ ಹಾಗೂ ಚಂದ್ರಶೇಖರಪ್ಪ ಸ.ನಂ 80 ರಲ್ಲಿ 2 ಎಕರೆ ಜಮೀನಿಗೆ ಸಂಬಂಧಿಸಿದ ಹಕ್ಕುಪತ್ರ ನೀಡಿದರು. ನಂತರ ನಡೆದ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಮಾತನಾಡಿದರು.

ಹುಲಿಕಟ್ಟೆ ಗ್ರಾಮದ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅರ್ಜಿ ಸಲ್ಲಿಸಿದ್ದಾರೆ. 63 ಜನರಿಗೆ ಸಾಗುವಳಿ ಚೀಟಿ ಸಿದ್ಧಪಡಿಸಲಾಗಿದೆ. ಆದರೆ, ಜಾಗದ ಬಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆ ನಕ್ಷೆಗಳಲ್ಲಿ ಗೊಂದಲವಿದೆ. ಕಳೆದ ಸಭೆಗಳಲ್ಲೇ ಎರಡು ಇಲಾಖೆಗಳು ಜಂಟಿಯಾಗಿ ಸರ್ವೇ ಮಾಡಿ ಇತ್ಯರ್ಥಪಡಿಸುವಂತೆ ತಿಳಿಸಲಾಗಿದ್ದರೂ ಇದುವರೆಗೆ ಆ ಕೆಲಸ ಆಗಿಲ್ಲ.

ಈಗ ಅರ್ಹರಿಗೆ ಹಕ್ಕುಪತ್ರ ನೀಡಲು ನಿರ್ಧರಿಸಲಾಗುವುದು ಎಂದರು. 1979ರಲ್ಲೇ ಈ ಗೋಮಾಳದ ಕೆಲ ಭಾಗ ಅರಣ್ಯ ಪ್ರದೇಶ ಎಂದು ಘೋಷಣೆಯಾಗಿದೆ ಎಂಬುದಾಗಿ ಉಪ ವಲಯ ಅರಣ್ಯಾಧಿ ಕಾರಿ ಹೇಳಿದರು. ತಹಶೀಲ್ದಾರ್‌ ಸಂತೋಷ್‌ಕುಮಾರ್‌ ಮಾತನಾಡಿ, ಈ 63 ಪಾಯಿಂಟ್‌ಗಳ ಜಿಪಿಎಸ್‌ ಅನ್ನು ಶೀಘ್ರದಲ್ಲೇ ಮಾಡಿಸಿ ಎಂದು ಹೇಳಿದರು. ಶಾಸಕ ಶಿವಮೂರ್ತಿ, ಈಗಾಗಲೇ ತುಂಬಾ ತಡವಾಗಿದೆ.

Advertisement

63 ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಲಾಗುವುದು. ಏನಾದರೂ ಕ್ರಮ ವಹಿಸುವುದಿದ್ದರೆ ನನ್ನ ಮೇಲೆ ಜರುಗಿಸಿ. ಇದು ಸಮಿತಿ ತೀರ್ಮಾನ ಕೂಡ ಆಗಿದೆ ಎಂದು ಸ್ಪಷ್ಟಪಡಿಸಿದರು. ಹುಣಸೆಕಟ್ಟೆ ಗ್ರಾಮದ ಸರ್ವೇ ನಂ. 23 ರಲ್ಲಿ 13 ಜನರು ಸಾಗುವಳಿ ಮಾಡುತ್ತಿರುವುದಾಗಿ ಹೇಳಿ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿ ಕುರಿತ ಚರ್ಚೆಯಲ್ಲಿ ಸಮಿತಿ ಸದಸ್ಯರು ಮಾತನಾಡಿ, ಅರ್ಜಿ ಸಲ್ಲಿಸಿದ ಒಬ್ಬರು ಸೇರಿದಂತೆ ಕೇವಲ ನಾಲ್ಕು ಜನ ಮಾತ್ರ ಸಾಗುವಳಿ ಮಾಡುತ್ತಿರುವುದು ಸಮಿತಿ ಗಮನಕ್ಕೆ ಬಂದಿದೆ ಎಂದರು. 

ಅರ್ಜಿದಾರರು ಇದು ಗೋಮಾಳವಾಗಿರುವುದರಿಂದ ಹಕ್ಕುಪತ್ರ ನೀಡಲು ಕೋರಿರುತ್ತಾರೆ. ಆದರೆ, ಇದು ಡೀಮ್ಡ್ ಅರಣ್ಯ ವಲಯಕ್ಕೆ ಸೇರಿದೆ ಎಂದು ದಾಖಲೆಯಲ್ಲಿದೆ. ಆದ್ದರಿಂದ ಸಾಗುವಳಿ ಹಕ್ಕುಪತ್ರ ನೀಡಲು ಬರುವುದಿಲ್ಲವೆಂದು ಉಪ ವಲಯ ಅರಣ್ಯಾಧಿ ಕಾರಿ ಇದಾಯತ್‌ ಸಭೆ ಗಮನಕ್ಕೆ ತಂದರು. ಶಾಸಕರು ಇದಕ್ಕೆ ಪ್ರತಿಕ್ರಿಯಿಸಿ, ಹುಣಸೆಕಟ್ಟೆಯ ಈ ಜಾಗದಲ್ಲಿ 15-20 ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿದೆ.

ಅಲ್ಲಿ ಯಾವುದೇ ಅರಣ್ಯ ಇಲ್ಲ. ಆದರೆ, 2005ರಿಂದ ಅರಣ್ಯ ಇಲಾಖೆಯಲ್ಲಿ ಪಹಣಿ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗುವ ಜಿಲ್ಲಾ ಸಮಿತಿ ಮುಂದೆ ಈ ಪ್ರದೇಶವನ್ನು ಡೀಮ್ಡ್ ಅರಣ್ಯ ವ್ಯಾಪ್ತಿಗೆ ಸೇರಿಸಿರುವುದನ್ನು ಕೈಬಿಡಲು ಶಿಫಾರಸು ಮಾಡಲು ಸಭೆ ತೀರ್ಮಾನಿಸಲಾಗಿದೆ ಎಂದರು. ವಡೇರಹಳ್ಳಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು 94-ಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸುತ್ತೋಲೆ ಬಂದು ತುಂಬಾ ಸಮಯ ಆಗಿದೆ.

ಆದರೆ, ಇನ್ನೂ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಲ್ಲ. ಮುಂದಿನ ವಾರದೊಳಗೆ ಸಂಪೂರ್ಣ ಕೆಲಸ ಮುಗಿದು ಹಕ್ಕುಪತ್ರ ಹಂಚುವಂತಾಗಬೇಕು ಎಂದು ತಹಶೀಲ್ದಾರ್‌ ಹಾಗೂ ರಾಜಸ್ವ ನಿರೀಕ್ಷಕರಿಗೆ ಶಾಸಕರು ಸೂಚಿಸಿದರು. ವಾಸಿಸುವವನೆ ನೆಲದೊಡೆಯ… ಆಧಾರದ ಮೇಲಿನ ಭೂ ಕಂದಾಯ ಅಧಿ ನಿಯಮದ ಅಕ್ರಮ-ಸಕ್ರಮೀಕರಣದಡಿ ತಾಲೂಕಿನಲ್ಲಿ ಸಾಕಷ್ಟು ಅರ್ಜಿಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಬಾಕಿ ಇದ್ದು, ಇವುಗಳನ್ನು ಶೀಘ್ರವಾಗಿ ಅಪ್‌ಲೋಡ್‌ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಅವರು ಸಂಬಂಧಿ ಸಿದ ಅಧಿಕಾರಿಗಳಿಗೆ ಸೂಚಿಸಿದರು. 

ತಾಲೂಕಿನಲ್ಲಿ ಮೂಲ ಗ್ರಾಮದಡಿ ಇರುವ ಹಲವಾರು ಕ್ಯಾಂಪ್‌(ತಾಂಡಾ, ಹಟ್ಟಿ)ಗಳನ್ನು ಮೂಲ ಗ್ರಾಮದಿಂದ ವಿಭಜಿಸಿ ಪ್ರತ್ಯೇಕ ಪಹಣಿ  ಪಡೆಯಲು ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ಮೂಲಗ್ರಾಮದಿಂದ ವಿಭಜಿಸಲು ತಾಲೂಕಿನಲ್ಲಿ ಒಟ್ಟು 30 ಅರ್ಹ ತಾಂಡಾ, ಹಟ್ಟಿ, ಮಜರೆ, ಹಾಡಿ, ಪಾಳ್ಯಗಳಿಗೆ ಸಂಬಂಧಿ ಸಿದಂತೆ ಪೂರ್ವಭಾವಿ ಕೆಲಸ ಆಗಿದೆ. ಸರ್ವೇ ಕಾರ್ಯಕ್ಕಾಗಿ ಸರ್ವೇ ಇಲಾಖೆಗೆ ವಹಿಸಲಾಗಿದೆ ಎಂದರು.

ಜಿಪಂ ಸದಸ್ಯ  .ಎಸ್‌. ಬಸವಂತಪ್ಪ, ಬಗರ್‌ಹುಕುಂ ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬಸವರಾಜಪ್ಪ, ಶಿವಗಾನಾಯ್ಕ, ನಳಿನಮ್ಮ, ರಾಮಸ್ವಾಮಿ, ಮಹೇಶ್ವರಪ್ಪ, ಪರಿವೀಕ್ಷಕರಾದ ನಾಗಭೂಷಣ್‌, ಮರಳಸಿದ್ದಪ್ಪ, ರಾಜಸ್ವ ನಿರೀಕ್ಷಕರಾದ ಚಂದ್ರಪ್ಪ, ಮಂಜಪ್ಪ, ಗುರುಪ್ರಸಾದ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next