Advertisement

ಗಣಿ ಇಲಾಖೆಯಿಂದ 3,500 ಕೋಟಿ ರೂ.ಆದಾಯ ನಿರೀಕ್ಷೆ

10:22 AM Dec 23, 2019 | Lakshmi GovindaRaj |

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಡಿ ಬರುವ ವಿವಿಧ ಘಟಕಗಳಿಂದ ಆಗುತ್ತಿರುವ ತೆರಿಗೆ ಕಳ್ಳತನ ತಪ್ಪಿಸಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಒದಗಿಸುವುದಕ್ಕೆ ಪೂರಕವಾಗುವಂತೆ ಅಗತ್ಯ ಕಾನೂನಿನ ತಿದ್ದುಪಡಿ ತರಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾನೈಟ್ಸ್‌, ಕಲ್ಲು ಗಣಿಗಾರಿಕೆ, ಕ್ರಷರ್‌ ಮಾಲೀಕರು, ಲಾರಿ ಮಾಲೀಕರ ಸಂಘದ ಜತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದೇವೆ. ಈ ಸಂಬಂಧ ಇಲಾಖೆಯಲ್ಲಿ ಇರುವ ನೀತಿಯನ್ನು ಇನ್ನಷ್ಟು ಸರಳೀಕರಿಸಿ, ತೆರಿಗೆ ಕಳ್ಳತನವನ್ನು ತಪ್ಪಿಸಿ, ಇಲಾಖೆಗೆ ಹೆಚ್ಚಿನ ಆದಾಯ ಬರುವ ರೀತಿಯಲ್ಲಿ ಕಾನೂನಿನಲ್ಲಿ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ನಮ್ಮದು ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ಇಲಾಖೆಯಾಗಿದೆ. 3,500 ಕೋಟಿ ರೂ.ರಾಜಸ್ವ ರೂಪದ ಆದಾಯವನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಈಗ 3 ಸಾವಿರ ಕೋಟಿ ರೂ.ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತಿದೆ. ಕಾನೂನು ತಿದ್ದುಪಡಿಯ ಮೂಲಕ ಗುರಿ ಸಾಧನೆ ಸಾಧ್ಯ ಎಂದರು.

ಕಳ್ಳಮಾರ್ಗದಲ್ಲಿ ತಮಿಳುನಾಡು ಕಡೆಯಿಂದ ಬರುವ ಕಲ್ಲುಗಣಿಗಾರಿಕೆಯ ಉತ್ಪನ್ನಗಳನ್ನು ತಡೆಯಲು ವ್ಯಾಪಕ ದಾಳಿ ಆರಂಭಿಸಿದ್ದೇವೆ. ಕೆಲವೇ ತಿಂಗಳಲ್ಲಿ ಸುಮಾರು 800 ಕೇಸು ದಾಖಲಿಸಿಕೊಂಡಿದ್ದೇವೆ. ಈ ಮೂಲಕ ತಮಿಳುನಾಡಿನಿಂದ ಅಕ್ರಮವಾಗಿ ಬರುವ ಕಲ್ಲು ಗಣಿಗಾರಿಕೆಯ ಉತ್ಪನ್ನ ತಡೆಯಲು ಸ್ವಲ್ಪ ಮಟ್ಟಿನ ಯಶ ಕಂಡಿದ್ದೇವೆ ಎಂದರು.

“ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ ಪ್ರಶಸ್ತಿ-2019′ ಪ್ರದಾನ
ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಪಾತ್ರ ಪ್ರಮುಖವಾಗಿದ್ದು, ಅವರನ್ನು ಗುರುತಿಸಿ ಉತ್ತೇಜಿಸುವ ಕೆಲಸ ನಿರಂತರವಾಗಿ ನಡೆಯಲಿವೆ ಎಂದು ಅರಣ್ಯ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ ಹೇಳಿದ್ದಾರೆ.  ಮಲ್ಲೇಶ್ವರದ ಅರಣ್ಯ ಭವನದಲ್ಲಿ ಶನಿವಾರ “ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ ಹಾಗೂ ಅರಣ್ಯ ಇಲಾಖೆ’ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ “ಅತ್ಯುತ್ತಮ ಸೇವೆ ಸಲ್ಲಿಸಿದ ಇಲಾಖೆಯ ಸಿಬ್ಬಂದಿಗೆ ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ ಪ್ರಶಸ್ತಿ-2019′ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲರೂ ಬಹಳಷ್ಟು ಶ್ರಮ ವಹಿಸುತ್ತಾರೆ. ಅದರಲ್ಲಿಯೂ ಕೆಳ ಹಂತದ ಸಿಬ್ಬಂದಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಅರಣ್ಯ ರಕ್ಷಣೆ ಹಾಗೂ ವನ್ಯಜೀವಿಗಳ ಉಳಿವಿಗಾಗಿ ಕೆಲಸ ಮಾಡುತ್ತಾರೆ ಎಂದು ಶ್ಲಾ ಸಿದರು.

ಸಾಹಸಕ್ಕೆ ಸನ್ಮಾನ ಪ್ರೇರಣೆ: ಅರಣ್ಯ ಪಡೆಯ ಮುಖ್ಯಸ್ಥ ಪುನಾಟಿ ಶ್ರೀಧರ್‌ ಮಾತನಾಡಿ, ಅರಣ್ಯದೊಳಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವಹಿಸಿ, ಕೆಲವೊಮ್ಮೆ ತಮ್ಮ ಪ್ರಾಣ ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಈ ಮೂಲಕ ಬೆಲೆ ಬಾಳುವ ಅರಣ್ಯ ಸಂಪತ್ತನ್ನು ಉಳಿಸುವಲ್ಲಿ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತಾರೆ. ಇಂತವರಿಗೆ ಇಲಾಖೆಗಳು ಹಾಗೂ ಟ್ರಸ್ಟ್‌ ಗಳು ನೀಡುವ ಪ್ರಶಸ್ತಿ ಇನ್ನಷ್ಟು ಸ್ಪೂರ್ತಿ ತುಂಬುತ್ತದೆ. ಜತೆಗೆ, ಸಾಹಸಕ್ಕೆ ಸನ್ಮಾನವು ಅನೇಕರಿಗೆ ಪ್ರೇರಣೆಯಾಗುತ್ತದೆ ಎಂದರು.

ಬೇಸಿಗೆ ನಿರ್ವಹಣೆಗೆ ಶೀಘ್ರ ಸಭೆ: ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಸಿ.ಸಿ. ಪಾಟೀಲ್‌, ಬೇಸಿಗೆ ಯಲ್ಲಿ ಅರಣ್ಯ ದೊಳಗೆ ಉಂಟಾಗುವ ಬೆಂಕಿ ಅನಾಹುತ ಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುವುದು. ಮುಂದಿನ ತಿಂಗಳಿನಲ್ಲಿಯೇ ಅಧಿಕಾರಿಗ ಳೊಂದಿಗೆ ಈ ಸಂಬಂಧ ಸಭೆ ನಡೆಸಲಾಗುವುದು. ಅರಣ್ಯ ಇಲಾಖೆ ಯಲ್ಲಿ ಕಾರ್ಪೋರೇಟ್‌ ಸಾಮಾಜಿಕ ಹೊಣೆ ಗಾರಿಕೆ ನಿಧಿ ಸಾಕಷ್ಟು ಇದ್ದು, ಸೂಕ್ತ ಯೋಜನೆ ಗಳನ್ನು ರೂಪಿಸುವ ಮೂಲಕ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳ ನೆರವಿಗೆ ಸಹಕಾರ ನೀಡಲಾಗುವುದು ಎಂದರು.

ಮಹದಾಯಿಗಾಗಿ ಯಡಿಯೂರಪ್ಪ ಅವರ ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆ ಭಾಗದ ಜನತೆಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಕೂಡ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ. ನಾವು ಕೂಡ ಕೇಂದ್ರದ ಮೇಲೆ ಒತ್ತಡ ತರಲಿದ್ದೇವೆ.
-ಸಿ.ಸಿ.ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಸಚಿವ

ಪ್ರಶಸ್ತಿಗೆ ಭಾಜನರಾದವರು ಉಪ ವಲಯ ಅರಣ್ಯಾಧಿಕಾರಿಗಳು
-ಹಳಿಯಾಳ ವಿಭಾಗದ ಜಿ, ಸಂತೋಷ್‌.
-ಕಾರವಾರ ವಿಭಾಗದ ಹಜರತ್‌ ಸಾಬ ಗೌಸಖಾನ ಕುಂದಗೋಳ.
-ಬೆಂಗಳೂರು ನಗರ ವಿಭಾಗದ ಎಸ್‌.ಜೆ.ನವೀನ್‌ಕುಮಾರ್‌.
-ಮಡಿಕೇರಿ ವಿಭಾಗದ ಶಶಿ ಪಿ.ಟಿ.
-ಸಕಲೇಶಪುರ ಸಂಶೋಧನೆ ಘಟಕದ ಚರಣಕುಮಾರ್‌.
-ಬೆಳಗಾವಿ ಸಾಮಾಜಿಕ ಅರಣ್ಯ ವಿಭಾಗದ ಸೋಮಶೇಖರ ಬಿ.ಪಾವಟೆ.
-ಭದ್ರಾ ವನ್ಯಜೀವಿ ವಿಭಾಗದ ಷಣ್ಮುಖ ಯು.
-ಹೊನ್ನಾವರ ವಿಭಾಗದ ಎಚ್‌.ಎ.ನಯನ ಕುಮಾರಿ.
-ಹೊನ್ನಾವರ ವಿಭಾಗದ ಮಹದೇವ ಎಂ.ಮಡ್ಡಿ.

ಅರಣ್ಯ ರಕ್ಷಕರು
-ಮೈಸೂರು ವನ್ಯಜೀವಿ ವಿಭಾಗದ ಎಂ.ಡಿ.ಅಯ್ಯಪ್ಪ.
-ಮಂಗಳೂರು ವಿಭಾಗದ ಶರತ್‌ ಶೆಟ್ಟಿ.
-ವಿರಾಜಪೇಟೆ ವಿಭಾಗದ ಚೌಡಪ್ಪನಾಯ್ಕ ವಿ.ಜಿಡ್ಡಿಮನಿ.
-ಕೊಳ್ಳೇಗಾಲ ವಿಭಾಗದ ಅಬ್ದುಲ್‌ ಮುಜೀಬ್‌.

ಅರಣ್ಯ ವೀಕ್ಷಕರು
-ಬಳ್ಳಾರಿ ವಿಭಾಗದ ಪಾಪಣ್ಣ ಸಣ್ಣ ಬೋರಯ್ಯ.
-ಕಾರವಾರ ವಿಭಾಗದ ಸಂಜೀವಿ ಮಾರುತಿ ಅಸ್ನೋಟಿಕರ್‌.
-ಹೊನ್ನಾವರ ವಿಭಾಗದ ಕ್ಷೇಮಾಭಿವೃದ್ಧಿ ಕಾವಲುಗಾರ ಜಟ್ಟಿ ತಿಮ್ಮಯ್ಯ ನಾಯ್ಕ.

Advertisement

Udayavani is now on Telegram. Click here to join our channel and stay updated with the latest news.

Next