Advertisement

30 ಆಡಳಿತ ಸೌಧ ನಿರ್ಮಾಣಕ್ಕೆ ಪ್ರಸ್ತಾವನೆ: ಆರ್‌.ಅಶೋಕ್‌

10:28 PM Nov 26, 2022 | Team Udayavani |

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ನೂತನವಾಗಿ 30 ಆಡಳಿತ ಸೌಧವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಜಿಲ್ಲೆಯ ಜರಬಂಡಹಳ್ಳಿಯಲ್ಲಿ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅನುಮೋದನೆ ನೀಡಿದ ಕೂಡಲೇ ಹೊಸ ಆಡಳಿತ ಸೌಧವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಕೊರೊನಾ ನಿಯಂತ್ರಿಸಲು ಇಲಾಖೆಯ ಎಲ್ಲ ರೀತಿಯ ಅಭಿವೃದ್ಧಿ ಅನುದಾನವನ್ನು ಬಳಸಲಾಗಿತ್ತು. ಈಗ ಸೋಂಕು ನಿಯಂತ್ರಣಗೊಂಡಿದ್ದು, ಆಡಳಿತ ಸೌಧ ನಿರ್ಮಾಣ ಕಾರ್ಯಕ್ಕೆ ಸದ್ಯವೇ ಚಾಲನೆ ಸಿಗಲಿದೆ ಎಂದು ತಿಳಿಸಿದರು.

ಜನರಿಗೆ ಸರಕಾರಿ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು ಮತ್ತು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು 30 ಸುವರ್ಣ ಸೌಧಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಭೂ ಪರಿವರ್ತನೆ ಕಾಯ್ದೆ ತಿದ್ದುಪಡಿ
ರೈತರು ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅವರಿಗೆ ಭೂ ಪರಿವರ್ತನೆ ಮಾಡಿಕೊಂಡು ಮನೆ ಕಟ್ಟಿಕೊಳ್ಳಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇರುವಂತಹ ಕಾನೂನಿನ ಅಡಿಯಲ್ಲಿ 6 ತಿಂಗಳಿಂದ ಒಂದು ವರ್ಷ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇವಲ 7 ದಿನಗಳಲ್ಲಿ ಭೂ ಪರಿವರ್ತನೆ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲು ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುವುದಾಗಿ ಸಚಿವರು ಹೇಳಿದರು.

Advertisement

ಅದೇ ರೀತಿಯಲ್ಲಿ ಎಸ್‌.ಸಿ., ಎಸ್‌.ಟಿ.ಗಾಗಿ ಇರುವ ಪಿಟಿಸಿಎಲ್‌ ಕಾಯ್ದೆಯಿಂದ ದಲಿತರು ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಇಲ್ಲ. ಯಾಕೆಂದರೆ ಅದಕ್ಕಾಗಿ ಒಂದು ಪ್ರಸ್ತಾವನೆ ಸರಕಾರಕ್ಕೆ ಬರಬೇಕು. ಅದು ಎರಡು, ಮೂರು ವರ್ಷ ಸಮಯ ಅವಕಾಶ ಬೇಕಾಗಿರುವುದರಿಂದ ಅದಕ್ಕೆ ಬದಲಾವಣೆ ತರಲು ನಿರ್ಧರಿಸಲಾಗಿದೆ. ಸರಕಾರದ ಬದಲಿಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ. ಇದರಿಂದ ದಲಿತರ ನಿರ್ದಿಷ್ಟ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ರೈತರ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳನ್ನು ಕಂದಾಯ ಇಲಾಖೆ ವತಿಯಿಂದ ಜಾರಿಗೆ ತರಲಾಗುತ್ತಿದೆ. ಕೊಡುಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರು, ರಬ್ಬರ್‌ ಬೆಳೆಗಾರರು ಸುಮಾರು 1 ಲಕ್ಷಕ್ಕೂ ಅಧಿಕ ಎಕರೆ ಜಮೀನಿನಲ್ಲಿ 70-80 ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ, ಅವರ ಅನುಕೂಲಕ್ಕಾಗಿ ಒಂದು ಕಾಯ್ದೆಯನ್ನು ತರುತ್ತಿದ್ದೇವೆ, ಬೆಳೆಗಾರರಿಗೆ 30 ವರ್ಷ ಲೀಸ್‌ಗೆ ಕೊಟ್ಟು ಸರಕಾರಕ್ಕೆ ವಾರ್ಷಿಕ ಇಂತಿಷ್ಟು ಅಂತ ಅಭಿವೃದ್ಧಿ ಶುಲ್ಕವನ್ನು ಪಾವತಿಸಿ ಅವರು ವ್ಯವಸಾಯ ಮತ್ತು ಜೀವನ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ನಾಡ ಕಚೇರಿಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜನರಿಗೆ ಸಿಗಬೇಕು, ಗ್ರಾಮೀಣ ಪ್ರದೇಶದಲ್ಲಿ ವಸತಿ ನಿಲಯ ಇಲ್ಲ ಎಂದರೆ ಬಾಡಿಗೆ ಮನೆಗಳನ್ನು ಪಡೆದು ಗ್ರಾಮದಲ್ಲಿ ವಾಸ್ತವ್ಯ ಮಾಡಿ ಜನರಿಗೆ ಸೇವೆ ಮಾಡಬೇಕು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಕಂದಾಯ ಸಚಿವರು, ಸುತ್ತೋಲೆಯನ್ನು ಹೊರಡಿಸಲಾಗುವುದೆಂದು ಎಂದು ಹೇಳಿದರು.

ನಾನು ಮಾಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈಗಾಗಲೇ ಸುಮಾರು 70 ಸಾವಿರ ಜನರಿಗೆ ವಿವಿಧ ಸವಲತ್ತುಗಳನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮಾಡಿರುವ ಗ್ರಾಮ ವಾಸ್ತವ್ಯಗಳಲ್ಲಿ ಅನೇಕ ಜನರಿಗೆ ಸೌಲಭ್ಯಗಳು ಒದಗಿಸಲಾಗಿದ್ದು ಲಕ್ಷಾಂತರ ಜನರಿಗೆ ಇದರಿಂದ ಅನುಕೂಲವಾಗಿದೆ ಎಂದರು.

ಶಾಸಕರಿಗೆ ಪತ್ರ ವ್ಯವಹಾರ
ರಾಜ್ಯದಲ್ಲಿರುವ ಶಾಸಕರು, ಪರಿಷತ್‌ ಸದಸ್ಯರಿಗೆ ಪತ್ರ ಬರೆದು ಲಭ್ಯ ಇರುವ ಸರಕಾರಿ ಭೂಮಿಯ ಲಭ್ಯತೆ, ಆದ್ಯತೆ ಮೇಲೆ ಸಾಗುವಳಿ, ಸರಕಾರಿ ಶಾಲೆ, ಆಸ್ಪತ್ರೆ ಇನ್ನಿತರೆ ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು. ಬಹಳಷ್ಟು ರೈತರು ಅವರ ಭೂಮಿಯ ನೋಂದಣಿ ಆಗಿದ್ದರೂ ಖಾತೆ ಮಾಡಲು ಇರುವ ಸಮಯಾವಕಾಶ 34 ದಿನ ಇದ್ದರೂ 7 ದಿನಗಳಲ್ಲಿ ಇತ್ಯರ್ಥಪಡಿಸಲು ಸೂಚನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಿಂಚಣಿಗಾಗಿ ಪ್ರತಿ ವರ್ಷ 291ಕೋಟಿ ರೂ. ಖರ್ಚು ಆಗುತ್ತಿದ್ದು, 204 ಕಂದಾಯ ಗ್ರಾಮಗಳನ್ನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಸರಕಾರದ ಖಜಾನೆ ಖಾಲಿಯಾಗಿಲ್ಲ
ರಾಜ್ಯ ಸರಕಾರ ಕೆಲಸ ಮಾಡುತ್ತಿಲ್ಲ, ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷ ನಾಯಕರು ಟೀಕೆ ಮಾಡುತ್ತಾರೆ. ಆದರೆ ಅವರು ಬಂದು ನೋಡಬೇಕು. ರಾಜ್ಯದ ಪ್ರತಿಯೊಂದು ಜಿಲ್ಲಾಧಿಕಾರಿ ಖಾತೆಯಲ್ಲಿ ಕನಿಷ್ಠ 5 ಕೋಟಿ ರೂ. ಇರುವಂತೆ ನಿಗಾ ವಹಿಸಿದ್ದು, ಬೆಳಗಾವಿಯಲ್ಲಿ ಮಾತ್ರ 60 ಕೋಟಿ ರೂ. ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 14 ಕೋಟಿ ರೂ. ಇದೆ. ಅವರು ಹೇಳಿದಂತೆ ನಾವು ದಿವಾಳಿ ಹಂತಕ್ಕೆ ಹೋಗಿಯೇ ಇಲ್ಲ. ಮುಖ್ಯಮಂತ್ರಿಗಳ ಆಸಕ್ತಿಯಿಂದ ತೆರಿಗೆ ಸಂಗ್ರಹ ತೃಪ್ತಿದಾಯಕವಾಗಿದೆ.
-ಆರ್‌.ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next