Advertisement

ವಾರಂಟಿ ಇದ್ದರೂ ರಿಪೇರಿಗೆ ಒಲ್ಲೆ ಎಂದ ಕಂಪೆನಿ : ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋದ ವ್ಯಕ್ತಿ

02:50 PM Jun 13, 2022 | Team Udayavani |

ಬೆಂಗಳೂರು: ವಾಶಿಂಗ್‌ ಮೆಷಿನ್‌ ವಿಸ್ತೃತ ಸೇವೆಯನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತನ್ನ ಪತ್ನಿ ಒತ್ತಾಯಪೂರ್ವಕವಾಗಿ ಕೈಯಿಂದ ಬಟ್ಟೆಗಳನ್ನು ತೊಳೆಯುವಂತಾಗಿದೆ. ಇದರಿಂದ ಆಕೆಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದಕ್ಕೆ ಕಾರಣವಾದ ಎಲೆಕ್ಟ್ರಾನಿಕ್‌ ಕಂಪೆನಿಯಿಂದ 3.7 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಹಕರೊಬ್ಬರು ವ್ಯಾಜ್ಯಗಳ ಪರಿಹಾರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Advertisement

ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ಎಲೆಕ್ಟ್ರಾನಿಕ್‌ ತಯಾರಿಕಾ ಕಂಪೆನಿ ದೂರುದಾರನಿಗೆ 20,015 ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಉಚಿತ ಸೇವೆ ನೀಡಬೇಕಿತ್ತು
ಬಲಗೆರೆಯ ನಿವಾಸಿ 2011ರಲ್ಲಿ ವೈಟ್‌ ಫೀಲ್ಡ್‌ ನಲ್ಲಿರುವ ಎಲೆಕ್ಟ್ರಾನಿಕ್‌ ಕಂಪೆನಿಯೊಂದರ ಫ್ರಂಟ್‌ ಲೋಡ್‌ ಫ‌ುಲ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ ಅನ್ನು ಖರೀದಿಸಿದ್ದರು. ಈ ವೇಳೆ 5,015 ರೂ. ಹೆಚ್ಚವರಿ ಹಣ ನೀಡಿ 2 ವರ್ಷದ ವಿಸ್ತೃತ ವಾರಂಟಿ ಸೇವೆ ಪಡೆದುಕೊಂಡಿದ್ದರು. ಇದರ ಅವಧಿಯು 2018ರಿಂದ 2020 ವರೆಗೆ ಇತ್ತು. ಷರತ್ತಿನ ಅನ್ವಯ ಎರಡು ವರ್ಷದ ಅವಧಿಯಲ್ಲಿ ಉಚಿತವಾಗಿ ಗ್ರಾಹಕರಿಗೆ ಸೇವೆಯನ್ನು ಸಂಸ್ಥೆಯು ತ್ವರಿತವಾಗಿ ನೀಡಬೇಕಿತ್ತು.

ದೂರು ನೀಡಿದ್ದರೂ ತುರ್ತಾಗಿ ಪ್ರತಿಕ್ರಿಯಿಸದ ಕಂಪೆನಿ
ಈ ನಡುವೆ ದೂರುದಾರರ ಖರೀದಿಸಿದ ವಾಷಿಂಗ್‌ ಮೆಷಿನ್‌ ಓವರ್‌ ಹಿಟ್‌ನಿಂದಾಗಿ ಡೋರ್‌ ಹಾಳಾಗಿದ್ದು, ಬಟ್ಟೆಗಳು ಹರಿದು ಹೋಗುತ್ತಿತ್ತು. ಈ ಬಗ್ಗೆ ಎಲೆಕ್ಟ್ರಾನಿಕ್‌ ಸಂಸ್ಥೆಯ ಸರ್ವೀಸ್‌ ಸೆಂಟರ್‌ಗೆ ದೂರು ದಾಖಲಿಸಿದ್ದರು. ಸತತ ಅನೇಕ ಬಾರಿ ದೂರು ನೀಡಿದ ಬಳಿಕ ಸರ್ವಿಸ್‌ ಸೆಂಟರ್‌ ಸಿಬಂದಿ ಭೇಟಿ ಮಾಡಿ ವಾಷಿಂಗ್‌ ಮೆಷಿನ್‌ ಫೋಟೋ ತೆಗೆದುಕೊಂಡು ಹೋಗಿದ್ದಾರೆ.

ಅಂದಿನಿಂದ 2020ರ ಜನವರಿ ತನಕ ಸರ್ವೀಸ್‌ ಸೆಂಟರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಸರ್ವಿಸ್‌ ಸೆಂಟರ್‌ಗೆ ಇ-ಮೇಲ್‌ ಮೂಲಕ ದೂರು ಸಹ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಗ್ರಾಹಕ ಕೋರ್ಟ್‌ ಮೊರೆ ಹೋಗಿದ್ದರು.

Advertisement

ಕೋರಿದ್ದು 3.7 ಲಕ್ಷ ರೂ.
ದೂರುದಾರರು ಕಂಪೆನಿಯಿಂದ ಒಟ್ಟು 3.7 ಲಕ್ಷ ರೂ. ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ 5,015 ರೂ. ಸರ್ವಿಸ್‌ ವಾರೆಂಟಿ ವಿಸ್ತರಿಸಿದ ಮೊತ್ತಕ್ಕೆ ಶೇ. 12ರಷ್ಟು ಬಡ್ಡಿ, ಡೋರ್‌ ಗ್ಲಾಸ್‌ 562 ರೂ., ವಾಶಿಂಗ್‌ ಮೆಷಿನ್‌ ಹಾಳಾದ ಸಮಯದಲ್ಲಿ ಬಟ್ಟೆಗಳನ್ನು ಕೈನಲ್ಲಿ ತೊಳೆದಿರುವುದರಿಂದ ಹೆಂಡತಿಗೆ ಬೆನ್ನು ನೋವು ಉಂಟಾಗಿರುವುದರ ಪರಿಹಾರ 2 ಲಕ್ಷ, ವ್ಯಾಜ್ಯ ಸಂಬಂಧಿಸಿದಂತೆ 1 ಲಕ್ಷ ಪರಿಹಾರ ಕೋರಿದ್ದರು.

ಸಿಕ್ಕಿದ್ದು 20,015 ರೂ.
ನ್ಯಾಯಾಲಯ ಎರಡೂ ಕಡೆಯ ವಾದದ ಪರಿಶೀಲನೆ ನಡೆಸಿ, ದೂರುದಾರರು ಖರೀದಿಸಿದ 2 ವರ್ಷದ ಸರ್ವಿಸ್‌ ವಾರೆಂಟಿ ಮೊತ್ತ 5,019 ರೂ.ಗೆ ದೂರು ದಾಖಲಾದ ದಿನದಿಂದ ಪರಿಹಾರ ಪಾವತಿಯಾಗುವವರೆಗೆ ಶೇ. 9ರ ಬಡ್ಡಿ ದರದಲ್ಲಿ ಹಣ, ಜತೆಗೆ ಪರಿಹಾರವಾಗಿ 10,000 ರೂ. ಮತ್ತು 5,000 ರೂ. ವ್ಯಾಜ್ಯಕ್ಕೆ ಸಂಬಂಧಿಸಿದ ಖರ್ಚು ಹೀಗೆ ಒಟ್ಟು 20,015 ರೂ. ಪರಿಹಾರಕ್ಕೆ ಆದೇಶಿಸಿದೆ.

  • ತೃಪ್ತಿ ಕುಂಬ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next