Advertisement

ಪರಸ್ಪರ ಸಹಕಾರದೊಂದಿಗೆ ಕೆಲಸ:ದಕ್ಷಿಣ ವಲಯ ಪರಿಷತ್ತಿನ ಸಭೆಯಲ್ಲಿ ಸಿಎಂ

07:12 PM Nov 14, 2021 | Team Udayavani |

ತಿರುಪತಿ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಮರ್ಥ ಕೇಂದ್ರ ಮತ್ತು ರಾಜ್ಯಗಳ ಅಗತ್ಯವಿದೆ. ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ತಿಳಿಸಿದರು.

Advertisement

ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ತಿನ 29 ನೇ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಕ್ಷಿಣ ಭಾರತದ ರಾಜ್ಯಗಳೆಲ್ಲವೂ ಪ್ರಾಕೃತಿಕವಾಗಿ ಸಂಪರ್ಕಿತವಾಗಿರುವುದರಿಂದ ನಾವೆಲ್ಲರೂ ಒಟ್ಟಾಗಿ ಕೆಲಸಮಾಡುವುದು ಅನಿವಾರ್ಯ. ದಕ್ಷಿಣದ ರಾಜ್ಯಗಳು ಸ್ವತಂತ್ರವಾಗಿ ಅಲ್ಲದೆ, ಪರಸ್ಪರ ಅವಲಂಬಿತರಾಗಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಪರಿಸ್ಥಿತಿ ಇದೆ. ರಾಷ್ಟ್ರದ ಒಳಿತಿಗಾಗಿ ಒಮ್ಮತದಿಂದ ಕೆಲಸ ಮಾಡಿದಾಗ ಭಾರತದ ಅಭಿವೃದ್ಧಿ ಸಾಧ್ಯವೆಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಪ್ರಧಾನ ಮಂತ್ರಿಗಳ ಸಹಕಾರಿ ಸಂಯುಕ್ತ ತತ್ವ ನಮ್ಮ ಮೂಲಮಂತ್ರವಾಗಬೇಕು. ಒಟ್ಟಾಗಿ ಕೆಲಸ ಮಾಡುವ ಮೂಲಕ ಇದನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬೊಮ್ಮಾಯಿ ಹೇಳಿದರು.

ದಕ್ಷಿಣ ವಲಯ ಪರಿಷತ್ತು ಸಭೆಗಳು ನೀರು ಹಂಚಿಕೆ, ಸಾರಿಗೆ ಸಂಪರ್ಕ, ಆರೋಗ್ಯ ಮತ್ತು ವ್ಯವಹಾರಗಳನ್ನು ಒಮ್ಮತದಿಂದ ಬಗೆಹರಿಸಿಕೊಳ್ಳು ಉತ್ತಮ ವೇದಿಕೆಯಾಗಿದೆ. ದಕ್ಷಿಣದ ರಾಜ್ಯಗಳು ಎಲ್ಲ ವಲಯಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

Advertisement

ಇತರೆ ರಾಜ್ಯಗಳೊಂದಿಗೆ ಕರ್ನಾಟಕದ ಸಮನ್ವಯಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು

• ಗೋದಾವರಿ, ಕಾವೇರಿ ಮತ್ತು ಇತರೆ ನದಿಗಳ ಲಿಂಕ್ ಯೋಜನೆ ಬಗ್ಗೆ ರಾಜ್ಯ ತನ್ನ ಅಭಿಪ್ರಾಯವನ್ನು ಈಗಾಗಲೇ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ತಿಳಿಸಿದೆ. ಕಾವೇರಿ, ಕೃಷ್ಣಾ ಮತ್ತು ಪೆನ್ನಾರ್ ಜಲಾನಯನ ಪ್ರದೇಶದಲ್ಲಿ ರಾಜ್ಯಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಬೇಕೆಂಬ ವಾದವನ್ನು ಸಿಎಂ ಸ್ಪಷ್ಟಪಡಿಸಿದರು.

• ಸಹ ಜಲಾನಯನ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಪಾಲನ್ನು ನಿರ್ಧರಿಸಲಾಗಿಲ್ಲದಿದ್ದರೂ ತಮಿಳುನಾಡು ಕಾವೇರಿ- ವಗೈ- ಗುಂಡಾರ್ ಸಂಪರ್ಕ ಕಾಮಗಾರಿಯನ್ನು ಮುಂದುವರೆಸಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಕಾವೇರಿ- ವಗೈ- ಗುಂಡಾರ್ ಸಂಪರ್ಕದ ಪ್ರಸ್ತಾವನೆಯನ್ನು ಅನುಮೋದಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

• ಜಲ ನ್ಯಾಯ ಮಂಡಳಿ ತೀರ್ಪನ್ನು ಉಲ್ಲಂಘಿಸಿ ಹೆಚ್ಚುವರಿ ನೀರಿನ ಬಳಕೆಗೆ ಯೋಜಿಸಿರುವ ಬೃಹತ್ ಮಟ್ಟದ ಶಾಶ್ವತ ಯೋಜನೆಗಳಿಗೆ ಶಾಸನಬದ್ಧ ಅನುಮೋದನೆಯನ್ನು ನೀಡಬಾರದು ಎಂದು ಮುಖ್ಯಮಂತ್ರಿಗಳು ಪುನರುಚ್ಛರಿಸಿದರು.

• ಕೃಷ್ಣಾ ಜಲಾಶಯದ ಮೂಲಕ ಶ್ರೀಶೈಲಂ ಜಲಾಶಯದಲ್ಲಿ ಅಪಾರ ಮೊತ್ತದ ಹೆಚ್ಚುವರಿ ನೀರನ್ನು ಬಳಸಿಕೊಂಡು ಪಲಮುರು ರಂಗಾರೆಡ್ಡಿ ಮತ್ತು ನಕ್ಕಲಗಂಡಿಯಲ್ಲಿ ಏತನೀರಾವರಿ ಯೋಜನೆಗಳನ್ನು ಕೈಗೊಳ್ಳಲು ತೆಲಂಗಾಣ ಅಥವಾ ಅಪೆಕ್ಸ್ ಮಂಡಳಿಗೆ ಅಧಿಕಾರವಿಲ್ಲ ಎಂದರು.

• 2050 ರಲ್ಲಿ ಪರಿಶೀಲನೆಗೆ ಒಳಪಡುವ ನೆಪದಲ್ಲಿ ಉಳಿಕೆ ನೀರನ್ನು ಬಳಸುವ ತೆಲಂಗಾಣ ರಾಜ್ಯದ ರಾಜೀವ್ ಗಾಂಧಿ ಸಂಗಮ ಬಂಡಾ ಬ್ಯಾರೇಜ್ ನಿರ್ಮಾಣಕ್ಕೆ ಕರ್ನಾಟಕದ ವಿರೋಧವಿದೆ. ಶಾಶ್ವತ ಯೋಜನೆಗಳಿಂದಾಗಿ ಉಳಿಕೆ ನೀರನ್ನು ಬಳಸಲು ಅನುಮತಿ ನೀಡಿದರೆ ಕರ್ನಾಟಕ ತನಗೆ ದೊರೆಯಬೇಕಾದ ಸಮಪಾಲಿನಿಂದ ವಂಚಿತವಾಗಲಿದೆ. ಈ ಬಗ್ಗೆ ಜಂಟಿ ಸಮೀಕ್ಷೆಯಲ್ಲಿ ರಾಜ್ಯ ಕೈಜೋಡಿಸಲು ಸಿದ್ಧವಿದೆ ಎಂದರು.

• ತುಂಗಭದ್ರಾ ನದಿಗೆ ಅಡ್ಡಲಾಗಿ ಆಂದ್ರಪ್ರದೇಶ ನಿರ್ಮಿಸುತ್ತಿರುವ ಗುಂದ್ರವುಲು ಯೋಜನೆಗೆ ಸಂಬಂಧಿಸಿದಂತೆ, ಕರ್ನಾಟಕದಲ್ಲಿ ಮುಳುಗಡೆಯಾಗಲಿರುವ ಗ್ರಾಮಗಳು ಮತ್ತು ಭೂಪ್ರದೇಶದ ಕುರಿತು ಜಂಟಿ ಸಮೀಕ್ಷೆಯಾಗಬೇಕು. ನ್ಯಾಯಮಂಡಳಿಗೆ ಸಲ್ಲಿಸಿರುವಂತೆ ನೀರು ಹಂಚಿಕೆಯ ವಿವರಗಳನ್ನು ಹಾಗೂ ಕೇಂದ್ರ ಸರ್ಕಾರದಿಂದ ಪಡೆದಿರುವ ಅನುಮೋದನೆಗಳ ವಿವರಗಳನ್ನು ಸಲ್ಲಿಸುವಂತೆ ಕೋರಿದರು.

• ಹಂಚಿಕೆಯ ಹೊರತಾಗಿ ಕೃಷ್ಣಾ ನೀರಿಗೆ ಸಂಬಂಧಿಸಿದಂತೆ ಆಂದ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಯಾವುದೇ ಯೋಜನೆಗಳಿಗೆ ಅನುಮತಿಯಿಲ್ಲ.

• ಕರ್ನಾಟಕ ಹಾಗೂ ನೆರೆರಾಜ್ಯಗಳ ನಡುವೆ ಅಂತರ ರಾಜ್ಯ ಪರಸ್ಪರ ಸಾರಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ತೆಲಂಗಾಣ, ಪುದುಚೆರಿ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ಒಪ್ಪಿಗೆಯನ್ನು ನಿರೀಕ್ಷಿಸಲಾಗಿದ್ದು, ಈ ಬಗ್ಗೆ ತ್ವರಿತ ಕ್ರಮಕ್ಕೆ ಮನವಿ ಮಾಡಿದರು.

• ಅಂತರರಾಜ್ಯ ಗೃಹ ಇಲಾಖೆಗಳ ಸಮನ್ವಯ ಹಲವು ಅಪರಾಧಗಳನ್ನು ತಡೆಗಟ್ಟಲು ಅಗತ್ಯವಾಗಿದೆ. ಗಡಿಗಳಲ್ಲಿ ಸಂಪರ್ಕಜಾಲಗಳನ್ನು ಬಲಪಡಿಸಲು ಕೋರಿದರು.

• ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಕೇಂದ್ರ ಸರ್ಕಾರದ ನವೀಕರಿಸಬಹುದಾದ ಖರೀದಿ ಬದ್ಧತೆ ಗುರಿಗಳನ್ನು ಸಾಧಿಸಿರುವ ಏಕೈಕ ರಾಜ್ಯ ಕರ್ನಾಟಕ. ಹೂಡಿಕೆದಾರರ ದೃಷ್ಟಿಯಿಂದ ಅಂತರರಾಜ್ಯ ದರಪಟ್ಟಿಯಲ್ಲಿನ ವ್ಯತ್ಯಾಸವನ್ನು ತೆಗೆದುಹಾಕುವಂತೆ ಬೊಮ್ಮಾಯಿ ಮನವಿಮಾಡಿದರು.

• ರಾಜ್ಯ ಸರ್ಕಾರ ಕೋರ್ ಡಿಬಿಟಿ ವೇದಿಕೆಯನ್ನು ಸೃಜಿಸಿದ್ದು, ಫಲಾನುಭವಿಗಳ ನಿಖರ ಗುರುತನ್ನು ಖಾತ್ರಿಪಡಿಸುತ್ತದೆ. ನಂಬಲರ್ಹವಲ್ಲದ ಡಾಟಾಬೇಸ್ ಸೃಜನೆ ತಡೆಗಟ್ಟುವುದರಿಂದ ಯುಎಡಿಎಐ ಮತ್ತು ಎನ್‍ಪಿಸಿಐ ಸಂಪರ್ಕಿಸಿ ನಕಲಿ ದಾಖಲೆಗಳ ಸೃಷ್ಟಿಗೆ ಕಾರಣವಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರ ತನ್ನ ಎಲ್ಲಾ ಫಲಾನುಭವಿ ಕೇಂದ್ರಿತ ಯೋಜನೆಗಳನ್ನು ರಾಜ್ಯ ಕೋರ್ ಡಿಬಿಟಿ ವೇದಿಕೆಗೆ ಅಳವಡಿಸುವುದಾಗಿ ತನ್ನ ಆಯವ್ಯಯದಲ್ಲಿ ಘೋಷಿಸಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಹಿಸಿದ್ದರು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಜಲ ಸಂಪನ್ಮೂಲ ಇಲಾಖೆ ಎಸಿಎಸ್ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಇಂಟೆಲಿಜೆನ್ಸ್ ವಿಭಾಗದ ಎಡಿಜಿಪಿ ದಯಾನಂದ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಲಕ್ಷ್ಯದ್ವೀಪದ ಆಡಳಿತಗಾರ ಪ್ರಫುಲ್ ಪಟೇಲ್, ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಡಾ. ತಮಿಲಿಸಾಯಿ ಸೌಂದರಾಜನ್, ಪಾಂಡಿಚೇರಿಯ ಮುಖ್ಯಮಂತ್ರಿ ಎನ್ ರಂಗಸ್ವಾಮಿ, ಪಾಂಡಿಚೇರಿಯ ಲೆಫ್ಟನೆಂಟ್ ಗವರ್ನರ್ ಎಡ್ಮಿರಲ್ ಡಿ ಕೆ ಜೋಶಿ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next