Advertisement

ಸಾಗರ: ತಾಲೂಕಿನಲ್ಲಿ 265  ಶಿಕ್ಷಕರ ಕೊರತೆ: ಬಿಇಓ ಬಿಂಬ ಕೆ.ಆರ್

04:04 PM Jun 11, 2022 | Suhan S |

ಸಾಗರ: ತಾಲೂಕಿನಲ್ಲಿ 265 ಶಿಕ್ಷಕರ ಕೊರತೆ ಇದ್ದು, 56 ಶಾಲೆಯಲ್ಲಿ ಶಿಕ್ಷಕರೇ ಇಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ತಾಲೂಕಿನ ಬಡ್ತಿ ಮುಖ್ಯ ಶಿಕ್ಷಕರು, ಪದವೀದರೇತರ ಶಿಕ್ಷಕರು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಫಲಿತಾಂಶ ತರಲು ಅಹೋರಾತ್ರಿ ಶ್ರಮಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್. ತಿಳಿಸಿದರು.

Advertisement

ಇಲ್ಲಿನ ಅಜಿತ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಬಡ್ತಿ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವ ಸಂಗತಿ ಅರಿವಿದ್ದ ಕ್ಷೇತ್ರದ ಶಾಸಕರು ಶಿಕ್ಷಣ ಸಚಿವರ ಮೇಲೆ ಒತ್ತಡ ತಂದು ಸಕಾಲಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದರಿಂದ ಮಕ್ಕಳಿಗೆ ಪಾಠಪ್ರವಚನಕ್ಕೆ ತೊಂದರೆ ಆಗಿಲ್ಲ. ತಾಲೂಕಿನ ಕರೂರು ಮತ್ತು ಭಾರಂಗಿ ಹೋಬಳಿಗಳಲ್ಲಿ ಅನೇಕ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು ತಮ್ಮ ಮೂಲಸ್ಥಳಕ್ಕೆ ವರ್ಗಾವಣೆಯಾಗಿದ್ದಾರೆ. ಇದರಿಂದ ಶಿಕ್ಷಕರ ಕೊರತೆ ಉಂಟಾಗಿದ್ದು, ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಲು ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಶಿಕ್ಷಕರ ಕೊರತೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಬಡ್ತಿ ಮತ್ತು ಪದವೀಧರೇತರ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸರ್ಕಾರದ ಎಲ್ಲ ಶೈಕ್ಷಣಿಕ ಯೋಜನೆಗಳು ನಿಮ್ಮ ಮೂಲಕ ಜಾರಿಯಾಗುತ್ತಿದ್ದು, ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾಧಕ ಶಿಕ್ಷಕರನ್ನು ಸನ್ಮಾನಿಸುವುದು, ಬಡ್ತಿ ಹೊಂದಿದ ಶಿಕ್ಷಕರನ್ನು ಗೌರವಿಸುವುದು ಮತ್ತು ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವುದು ಉತ್ತಮ ಸಂಪ್ರದಾಯವಾಗಿದೆ. ಇದರಿಂದ ಸಂಘಟನೆ ಸಮಾಜಮುಖಿಯಾಗಿ ಸಹ ಕೆಲಸ ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಮಾತನಾಡಿ, ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಬಡ್ತಿ ಮತ್ತು ಪದವೀಧರೇತರ ಮುಖ್ಯಶಿಕ್ಷಕರು ಹೆಚ್ಚಿನ ಪ್ರಯತ್ನ ನೀಡುತ್ತಿದ್ದಾರೆ. ಒತ್ತಡದ ನಡುವೆಯೂ ಕೆಲಸ ಮಾಡುತ್ತಿರುವ ಮುಖ್ಯಶಿಕ್ಷಕರ ಹಿತಕಾಯುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.

Advertisement

ಸಂಘದ ಗೌರವಾಧ್ಯಕ್ಷ ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಹಿರೇಮಠ, ಸಹ ಕಾರ್ಯದರ್ಶಿ ಹಾಲಾನಾಯ್ಕ, ಪ್ರಮುಖರಾದ ಜಗನ್ನಾಥ್ ಕೆ., ಮನೋಹರಪ್ಪ ಡಿ., ಮೂರ್ತಿ ಎಂ.ವೈ., ಮಾಲತೇಶ್ ಇನ್ನಿತರರು ಉಪಸ್ಥಿತರಿದ್ದರು. ಶೈಲಜ ಪ್ರಾರ್ಥಿಸಿದರು. ಎಂ.ವಿ.ಪ್ರಭು ಸ್ವಾಗತಿಸಿದರು. ರಮೇಶ್ ನಾರಾಯಣ ಪ್ರಾಸ್ತಾವಿಕ ಮಾತನಾಡಿದರು. ಎಂ.ಪಿ.ಸತ್ಯನಾರಾಯಣ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರು, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕ್ಷಕರನ್ನು, ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಬಡ್ತಿ ಮುಖ್ಯಶಿಕ್ಷಕರ ಮಕ್ಕಳಿಗೆ, ನಿವೃತ್ತ ಬಡ್ತಿ ಮುಖ್ಯಶಿಕ್ಷಕರು, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next