Advertisement

ಕಾಗದ ರಹಿತ ಆಡಳಿತ ಯೋಜನೆ ಹೆಸರಲ್ಲಿ 254 ಕೋಟಿ ರೂ. ಹಗರಣ: ರಮೇಶ್ ಬಾಬು ಆರೋಪ

03:13 PM Jun 23, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನ ಮಂಡಲದಲ್ಲಿ ಕಾಗದ ರಹಿತ ಆಡಳಿತ ವ್ಯವಸ್ಥೆ ತರುವ ಉದ್ದೇಶದ ಇ-ವಿಧಾನ್ ಯೋಜನೆ ಹೆಸರಲ್ಲಿ ಅಧಿಕಾರಿಗಳು 254 ಕೋಟಿ ರೂಪಾಯಿ ಹಗರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳ ಮಟ್ಟದಲ್ಲಿ 254 ಕೋಟಿ ಮೊತ್ತದ ಹಗರಣ ಮಾಡಲು ಮುಂದಾಗಿದ್ದು, ಈ ಕುರಿತು ಮೇ 5 ಹಾಗೂ 7 ರಂದು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ನಂತರ ಸ್ಪೀಕರ್ ಅರನ್ನು ಭೇಟಿ ಮಾಡಿಯೂ ಈ ವಿಚಾರವಾಗಿ ಮನವಿ ಮಾಡಿದ್ದೆ. ಸ್ಪೀಕರ್ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಮುಖ್ಯಸ್ಥರಾಗಿ ಸದನದ ಹಣವನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಾರ್ವಜನಿಕರ ವಿರೋಧದ ನಡುವೆಯೂ ಅಧಿಕಾರಿಗಳು ವಿಧಾನಸಭೆಯ ಸಚಿವಾಲಯಗಳಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ತರುವ ಜವಾಬ್ದಾರಿಯನ್ನು ಕಿಯೋನಿಕ್ಸ್ ಎಂಬ ಖಾಸಗಿ ಕಂಪನಿಗೆ ನೀಡುವ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

2017-18ರಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಆಯವ್ಯಯದಲ್ಲಿ ಕರ್ನಾಟಕ ವಿಧಾನಮಂಡಲದಲ್ಲಿ ನಗದು ರಹಿತ ಯೋಜನೆಯ ಇ-ವಿಧಾನ ಕಾರ್ಯಕ್ರಮ ಜಾರಿಗೊಳಿಸಲು ಪ್ರಾಥಮಿಕವಾಗಿ ಮೂಲಭೂತ ಸೌಕರ್ಯಗಳಿಗೆ 20 ಕೋಟಿ ರೂಪಾಯಿಗಳ ಬಿಡುಗಡೆ ಮತ್ತು ಈ ಯೋಜನೆಗೆ 250 ಕೋಟಿಗಳ ಅನುದಾನ ಘೋಷಣೆ ಮಾಡಿತ್ತು. ನಂತರ ಕೇಂದ್ರ ಸರ್ಕಾರ ಒಂದು ರಾಷ್ಟ್ರ ಒಂದು ವಿಧ ಎಂಬ ಉದ್ದೇಶದಿಂದ ಎಲ್ಲ ಕಡೆ ಒಂದೇ ರೀತಿಯ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಅಂದರೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಕ ಮೇವಾ ಎಂಬ ಯೋಜನೆ ಘೋಷಿಸಿದ್ದರು. ಯಾವ ರಾಜ್ಯಗಳ ಕಾಗದ ರಹಿತ ವ್ಯವಸ್ಥೆ ಜಾರಿಗೆ ಮುಂದೆ ಬರುತ್ತವೋ ಆ ರಾಜ್ಯಗಳಿಗೆ 60:40 ಅನುದಾನದ ನೀಡಲು ತೀರ್ಮಾನಿಸಲಾಗಿತ್ತು. ಅದಕ್ಕೆ ಅನುಗುಣವಾಗಿ 2018ರಲ್ಲಿ ಆಗಿನ ಮುಖ್ಯಕಾರ್ಯದರ್ಶಿಗಳು ವಿಜಯ್ ಭಾಸ್ಕರ್ ಅವರು ಕೇಂದ್ರಕ್ಕೆ ಪತ್ರ ಬರೆದು ಈ ಯೋಜನೆ ಜಾರಿಗೆ ಆಸಕ್ತಿ ಇದ್ದು ಇದರ ಡಿಪಿಆರ್ ಕಳುಹಿಸಿ, ಕೇಂದ್ರದ ಶೇ.60ರಷ್ಟು ಅನುದಾನ ಬಳಸಿಕೊಳ್ಳುವುದಾಗಿ ತಿಳಿಸಲಾಗಿತ್ತು. ನಂತರ ರಾಜ್ಯ ಸರ್ಕಾರಕ್ಕೆ ಕೇಂದ್ರ ಪತ್ರ ಬರೆದು ಈ ಯೋಜನೆಯ ಕಾರ್ಯಾಗಾರ ಏರ್ಪಡಿಸಲಾಗಿದ್ದು, ನಿಮ್ಮ ಸಚಿವಾಲಯದ ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ತಿಳಿಸಲಾಗುತ್ತದೆ. ನಂತರ ಹಲವು ವಿಚಾರ ಸಂಕೀರ್ಣ ನಡೆದಿದ್ದು, ಕಾಗೇರಿ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಆಗ ಪರಿಷತ್ ಸಭಾಧ್ಯಕ್ಷರಾಗಿದ್ದ ಹೊರಟ್ಟಿ ಅವರು ಭಾಗವಹಿಸಿದ್ದರು. ಈ ಸಮ್ಮೇಳನದ ನಂತರ ಸ್ಪೀಕರ್ ಅವರು ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಮೇವಾ ಯೋಜನೆ ಜಾರಿ ಹಾಗೂ ಅದರ ನಿರ್ವಹಣೆ ಮಾಡಲು ಉನ್ನತ ಮಟ್ಟದ ಸಮಿತಿ ಮಾಡಿತ್ತು.  254 ಕೋಟಿ ರೂ. ಮೊತ್ತದ ಯೋಜನೆಗೆ ಸುಮಾರು 152 ಕೋಟಿ ರೂ. ಕೇಂದ್ರದಿಂದ ಅನುದಾನ ಬರುತ್ತಿತ್ತು. ರಾಜ್ಯ ಸರ್ಕಾರ ಕೇವಲ 101 ಕೋಟಿ ಮಾತ್ರ ನೀಡಬೇಕಾಗಿತ್ತು. ಆದರೆ ಈ ಮೇವಾ ಯೋಜನೆ ಜಾರಿ ಮಾಡಿದರೆ ಅಧಿಕಾರಿಗಳ ಜೇಬು ತುಂಬುವುದಿಲ್ಲ ಎಂಬ ಉದ್ದೇಶದಿಂದ ವಿಧಾನಸಭೆ ಸ್ಪೀಕರ್ ಪರಿಷತ್ತಿನ ಸಭಾಪತಿಗಳ ದಾರಿ ತಪ್ಪಿಸಿ ಇದನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ ಎಂದರು.

ಕರ್ನಾಟಕ ವಿಧಾನಸಭೆ ಅಧಿಕಾರಿಗಳಿಂದ ಈ ಯೋಜನೆ ಜಾರಿ ಕುರಿತು ಕಿಯೋನಿಕ್ಸ್‌ ಸಂಸ್ಥೆಗೆ ಪತ್ರ ಬರೆಯಲಾಗುತ್ತದೆ. ನಂತರ ಕಂಪನಿಯು ಈ ಯೋಜನೆ ನಾವೆ ಮಾಡುತ್ತೇವೆ. ಕೇರಳ ಮೂಲಕ ಕಂಪನಿಗಳ ಮೂಲಕ ಮಾಡುವುದಾಗಿ ಎಂದು ಪತ್ರ ಬರೆಯುತ್ತಾರೆ. ಆಗ ಆರ್ಥಿಕ ಇಲಾಖೆಗೆ ಪತ್ರ ಬರೆದು 254 ಕೋಟಿ ಹಣ ಬಿಡುಗಡೆ ಮಾಡುವಂತೆ ಕೋರಲಾಗುತ್ತದೆ. ಇದರಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು 2020 ಡಿ.19 ಕಿಯೋನಿಕ್ಸ್‌ ವರದಿಯ ಯೋಜನೆಗೆ ಹಣ ಬಿಡುಗಡೆ ಮಾಡದಂತೆ ಸರ್ಕಾರದ ಆರ್ಥಿಕ ಇಲಾಖೆಗೆ ಪತ್ರ ಬರೆಯುತ್ತಾರೆ. ಆದರೆ ಇತ್ತೀಚೆಗೆ ವಿಧಾನ ಪರಿಷತ್ತಿನ ಸಭಾಪತಿಗಳು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಕಾಗದ ರಹಿತ ಯೋಜನೆಗೆ ಪತ್ಯೇಕವಾಗಿ ಅನುದಾನ ಬಿಡುಗಡೆಗೆ ಒತ್ತಾಯ ಮಾಡಲಾಗಿದೆ. ಹೀಗಾಗಿ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಸಾರ್ವಜನಿಕ ಹಿತದೃಷ್ಟಿಯಿಂದ 254 ಕೋಟಿಯ ಯೋಜನೆಯನ್ನು ಖಾಸಗಿಯವರಿಗೆ ನೀಡದಂತೆ ಮನವಿ ಮಾಡಲಾಗಿದೆ. ಸ್ಪೀಕರ್ ಅವರು ಅಧಿಕಾರಿಗಳ ತಪ್ಪು ಮಾಹಿತಿಯಿಂದ ದಾರಿ ತಪ್ಪಬಾರದು, ಕೇಂದ್ರದ ಮೇವಾ ಯೋಜನೆ ಜಾರಿ ಮಾಡಲಿ. ಸಾರ್ವಜನಿಕರ ಹಣ ಸಂರಕ್ಷಣೆಗೆ ಮುಂದಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಸ್ಪೀಕರ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಈ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ರಮೇಶ್ ಬಾಬು ಹೇಳದ್ದಾರೆ.

ಸ್ಪೀಕರ್ ಗಮನಕ್ಕೆ ಈ ವಿಚಾರ ಬಂದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರದ ಬಗ್ಗೆ ತಮಗೆ ಮಾಹಿತಿ ಇದೆಯೋ ಇಲ್ಲವೋ ಎಂದು ಸ್ಪೀಕರ್ ಅವರೇ ಹೇಳಬೇಕು. ಅವರ ಮೂಗಿನ ಕೆಳಗೆ ಇಷ್ಟು ದೊಡ್ಡ ಹಗರಣ ನಡೆಯುತ್ತಿದೆ. ಅವರ ಸಂವಿಧಾನತ್ಮಕ ಹುದ್ದೆಗೆ ಗೌರವ ನೀಡುತ್ತಾ ನಾವು ಅವರ ಮೇಲೆ ಆರೋಪ ಮಾಡುತ್ತಿಲ್ಲ. ಅವರು ಸಾರ್ವಜನಿಕ ಹಣವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದ್ದು, ಈ ಕಾರಣಕ್ಕೆ ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next