ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲ ಬುಧವಾರ ತೆರೆಯುವುದಕ್ಕೂ ಮುನ್ನ ತಿರುವನಂತಪುರದಲ್ಲಿ ಸೋಮವಾರ ಭಾರಿ ಪ್ರತಿಭಟನೆಯನ್ನು ಬಿಜೆಪಿ ನಡೆಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಆಯೋಜಿಸಿದ್ದ ಐದು ದಿನಗಳ ಶಬರಿಮಲೆ ಯಾತ್ರೆ ಸೋಮವಾರ ಮುಗಿದಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರಿಂಕೋರ್ಟ್ ತೀರ್ಪಿಗೆ ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದೆ. ಮಂಗಳವಾರದೊಳಗೆ ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ಸೋಮವಾರ ತಿರುವನಂತಪುರದಲ್ಲಿ ನಡೆದ ಭಾರಿ ರ್ಯಾಲಿಯಲ್ಲಿ, ಅಪಾರ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಮುಂದಿನ ಕಾರ್ಯಕ್ರಮದ ಬಗ್ಗೆ ನಿರ್ಧಾರ ಮಾಡಲು ಬುಧವಾರ ಪಟ್ಟಣಂತಿಟ್ಟದಲ್ಲಿ ಎನ್ಡಿಎ ಮುಖಂಡರು ಸಭೆ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಹೇಳಿದ್ದಾರೆ.
ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇನ್ನೊಂದೆಡೆ ದೇಗುಲದ ಆಡಳಿತ ಮಂಡಳಿ, ಅಯ್ಯಪ್ಪ ಸೇವಾ ಸಂಗಮ್, ಪಂದಳಂ ಅರಮನೆಯ ಸದಸ್ಯರು ಬುಧವಾರ ಸಭೆ ಸೇರಿ ಮಾತುಕತೆ ನಡೆಸಲಿದ್ದಾರೆ. ಮಹಿಳೆಯರು ಪ್ರವೇಶಿಸಲು ಪ್ರಯತ್ನಿಸಿದರೆ ದೇಗುಲದ ಬಾಗಿಲಿನಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.
ಶಬರಿಮಲೆ ಪ್ರವಾಸದ ತಾಣವಲ್ಲ. ಇದಕ್ಕೆ ಧಾರ್ಮಿಕ ಮಹತ್ವವಿದೆ. ಸಂಪ್ರದಾಯದ ಬಗ್ಗೆ ಗೌರವ ಇರುವ ಯಾವ ಮಹಿಳೆಯೂ ದೇಗುಲ ಪ್ರವೇಶಿಸುವುದಿಲ್ಲ.
ಕೆ.ಸುಧಾಕರನ್, ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ