Advertisement

224 ಕ್ಷೇತ್ರಗಳೂ ಸಿದ್ದರಾಮಯ್ಯಗೆ ಸುರಕ್ಷಿತವಲ್ಲ; ಸಚಿವ ಆರ್‌. ಅಶೋಕ ವ್ಯಂಗ್ಯ

09:22 PM Mar 20, 2023 | Team Udayavani |

ಬೆಂಗಳೂರು: ನನಗೆ ಸಿದ್ದರಾಮಯ್ಯ ಅವರ ಸ್ಥಿತಿ ಕಂಡು ಮರುಕವಾಗುತ್ತಿದೆ. ಕಳೆದ 6 ತಿಂಗಳಿಂದ ಓಡು ಮಗ ಓಡು ಎಂದು ಓಡುತ್ತಲೇ ಇದ್ದಾರೆ. ಅವರು ಎಲ್ಲಿಗೆ ಓಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದ 224 ಕ್ಷೇತ್ರಗಳೂ ಅವರಿಗೆ ಸುರಕ್ಷಿತವಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ವ್ಯಂಗ್ಯವಾಡಿದರು.

Advertisement

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಾದಾಮಿಯಲ್ಲಿ ಸ್ಪರ್ಧಿಸಿದ್ದರೆ ಉಪಯೋಗವಾಗುತ್ತಿತ್ತು. ಅದನ್ನು ಬಿಟ್ಟು ಕೋಲಾರಕ್ಕೆ ಬಂದರು. ಉರಿಗೌಡ, ನಂಜೇಗೌಡ ವಿಚಾರ ಕೋಲಾರದಲ್ಲೂ ಸದ್ದು ಮಾಡುತ್ತಿದ್ದು ಸಿದ್ದರಾಮಯ್ಯ ಅವರಿಗೆ ಉರಿ ಶುರುವಾಗಿದೆ. ಈಗ ವರುಣಾ ಅನ್ನುತ್ತಿದ್ದಾರೆ. ಅವರು ವರುಣಾಕ್ಕೂ ಹೋಗುವುದಿಲ್ಲ. ಬೇರೊಂದು ಕ್ಷೇತ್ರ ಹುಡುಕುತ್ತಾರೆಂದು ಲೇವಡಿ ಮಾಡಿದರು.

ಟಿಪ್ಪು ಹಿಂದೆ ಹೋಗಿ ಹಳ್ಳಕ್ಕೆ ಬಿದ್ದಿದ್ದಾರೆ: ಸಿದ್ದರಾಮಯ್ಯ ಅವರು ಯಾವಾಗ ಟಿಪ್ಪುವಿನ ಹಿಂದೆ ಬಿದ್ದರೋ ಆಗಿನಿಂದಲೇ ಅವರ ಅವನತಿ ಶುರುವಾಯಿತು. ಟಿಪ್ಪು ಹಿಂದೆ ಹೋಗಿ ವಿಜಯ್‌ ಮಲ್ಯ ಖಡ್ಗ ತಂದರು. ಆದರೆ ಅವರ ಪರಿಸ್ಥಿತಿ ಏನಾಯ್ತು? ಟಿಪ್ಪು ಸಿನಿಮಾ ಮಾಡಲು ಹೋದ ಸಂಜಯ್‌ ಖಾನ್‌ ಬೆಂಕಿಗೆ ಅಹುತಿಯಾದರು. ಇವರು ಕೂಡ ಟಿಪ್ಪುವಿನ ಹಿಂದೆ ಹೋಗಿ ಹಳ್ಳಕ್ಕೆ ಬಿದ್ದಿದ್ದಾರೆ. ಎಲ್ಲಿಯವರೆಗೂ ಅವರು ಟಿಪ್ಪುವಿನ ಖಡ್ಗವನ್ನು ಕೈಯಲ್ಲಿ ಹಿಡಿದಿಟ್ಟು ಕೊಳ್ಳುತ್ತಾರೋ ಅಲ್ಲಿಯವರೆಗೂ 224 ಕ್ಷೇತ್ರಗಳಲ್ಲಿ ಸ್ಥಳವಿಲ್ಲ ಎಂದರು.

ಟಿಪ್ಪು ನನಗೆ ಸಂಬಂಧವಿಲ್ಲ. ಟಿಪ್ಪು ಜಯಂತಿ ಮಾಡಿದ್ದೇ ತಪ್ಪು ಮುಂದೆ ನಾ ಮಾಡೋಲ್ಲ. ಎಲ್ಲಾದರೂ ಒಂದು ಕ್ಷೇತ್ರ ಕೊಡಿ ಎಂದು ನಾಡಿನ ಜನತೆಯನ್ನು ಕೇಳಿದರೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಆಶೀರ್ವಾದ ಮಾಡುತ್ತಾರೆ. ಟಿಪ್ಪು ವಿಚಾರದಲ್ಲಿ ಕ್ಷಮಾಪಣೆ ಕೇಳಬೇಕು. ಟಿಪ್ಪು ಜಯಂತಿ ಮಾಡಿದ್ದು ತಪ್ಪು ಎಂದು ಹೇಳಬೇಕು. ಜಯಂತಿ ಮಾಡಲು ಮುಸ್ಲಿಂರ ಷರಿಯತ್‌ನಲ್ಲಿ ಅವಕಾಶವಿಲ್ಲ. ಆದರೂ ಕೂಡ ಅವರು ಮಾಡಿದ್ದಾರೆ. ವೋಟ್‌ಗಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ, ಹಿಂದು ಸಮಾಜದ ವೋಟ್‌ ಕಳೆದುಕೊಂಡಿದ್ದಾರೆ ಎಂದು ದೂರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next