Advertisement

ಅಪರಾಧ ಜಗತ್ತಿನಲ್ಲಿ 2023ರ ತಲ್ಲಣ; ಸೈಬರ್‌ ವಂಚನೆಗಿಲ್ಲ ಕಡಿವಾಣ

04:02 PM Jan 01, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಛೋಟಾ ಮುಂಬೈ ಎಂದೇ ಖ್ಯಾತವಾದ ಹುಬ್ಬಳ್ಳಿಯಲ್ಲಿ 2023ನೇ ಸಾಲಿನಲ್ಲಿ ಅಪರಾಧ ಪ್ರಕರಣಗಳು ಒಂದಿಷ್ಟು ಕಡಿಮೆ ಆಗಿವೆ ಎಂದು ಕಂಡುಬಂದರೂ ಸುಶಿಕ್ಷಿತರು, ಸಭ್ಯರು ಹುಬ್ಬೇರಿಸುವಂತಹ ಘಟನೆಗಳು ನಡೆದವು. ಕ್ಷುಲ್ಲಕ ಕಾರಣಕ್ಕೆ ಸಹೋದರರು, ಗೆಳೆಯರ ಮಧ್ಯೆ ಹೊಡೆದಾಟ ನಡೆದು ಕೊಲೆಯಲ್ಲಿ ಅಂತ್ಯ, ಮಾದಕವಸ್ತು ಅಮಲಿನಲ್ಲಿ ನಡೆದ ಹಲ್ಲೆಯಂತಹ
ಘಟನೆಗಳು ಪೊಲೀಸರ ನಿದ್ದೆಗೆಡಿಸಿದವು. ಜೊತೆಗೆ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ ರೌಡಿಶೀಟರ್‌ ಮೇಲೆ ಗುಂಡು ಹಾರಿಸಿದ ಪ್ರಕರಣವೂ ನಡೆಯಿತು.

Advertisement

ಸೈಬರ್‌ ಕರಾಮತ್ತು: ಹಣ ದ್ವಿಗುಣ, ಪಾರ್ಟ್‌ ಟೈಂ ಜಾಬ್‌, ಮನೆ ಗೆಲಸ, ಬಾಡಿಗೆ ಮನೆ ಪಡೆಯುವುದಾಗಿ ಸೇರಿದಂತೆ ಒಂದಕ್ಕಿಂತ
ಮತ್ತೂಂದು ಭಿನ್ನವಾದ ವಿವಿಧ ಬಗೆಯ ಸೈಬರ್‌ ಕ್ರೈಂ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಮೋಸಗೊಂಡವರಲ್ಲಿ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ಬ್ಯಾಂಕ್‌ ಅಧಿಕಾರಿಗಳು, ಉದ್ಯೋಗಿಗಳು, ಎಂಜಿನಿಯರ್, ನಿವೃತ್ತ ನೌಕರರು, ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕರು, ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಹೊರತಾಗಿಲ್ಲ. ಅಶ್ಲೀಲ ಫೋಟೋ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಹೆದರಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೂ ಲೆಕ್ಕವಿಲ್ಲ.

ಜೂಜಾಟದ ಆರ್ಭಟ: ಜೂಜಾಟ, ಮಟ್ಕಾ ದಂಧೆ ಜೊತೆ ಕ್ರಿಕೆಟ್‌ ಬೆಟ್ಟಿಂಗ್‌ನಂತಹ ಪ್ರಕರಣಗಳು ಅವ್ಯಾಹತವಾಗಿ ನಡೆದವು. ಹಬ್ಬದ ವೇಳೆ ಜೂಜುಕೋರರ ಹಾಗೂ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ ಕುಳಗಳ ಆರ್ಭಟ ಜೋರಾಗಿತ್ತು. ಪೊಲೀಸರು ಇಂಥವರ ಮೇಲೆ ದಾಳಿ ನಡೆಸಿ ಹತೋಟಿಗೆ ತರುವಲ್ಲಿ ಯಶ ಕಂಡಿದ್ದಾರೆ.

ಆಯುಕ್ತರಾಗಿ ರೇಣುಕಾ: ಹು-ಧಾ ಪೊಲೀಸ್‌ ಆಯುಕ್ತಾಲಯ ಘಟಕಕ್ಕೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಆಯುಕ್ತರಾಗಿ ನಿಯುಕ್ತಿಯೊಂಡಿದ್ದು, ರೇಣುಕಾ ಸುಕುಮಾರ ಅಧಿಕಾರ ವಹಿಸಿಕೊಂಡಿದ್ದಾರೆ.

61.80 ಲಕ್ಷ ರೂ. ಮೌಲ್ಯದ ಬಂಗಾರದ ದ್ರಾವಣ ಕಳ್ಳತನ ಮರಾಠಗಲ್ಲಿಯ ಕೋಳಿಪೇಟೆಯಲ್ಲಿ ಬಂಗಾರ ಕರಗಿಸುವ ಅಂಗಡಿಯಿಂದ 61.80 ಲಕ್ಷ ರೂ. ಮೌಲ್ಯದ 1025 ಗ್ರಾಂ ತೂಕದ 24 ಕ್ಯಾರೆಟ್‌ ಬಂಗಾರದ ದ್ರಾವಣ ಕಳವಾಗಿತ್ತು. ಇದಕ್ಕೆ ಸಂಬಂಧಿಸಿ ಶಹರ ಠಾಣೆ ಪೊಲೀಸರು ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಿ, 20 ತೊಲೆ ಗಟ್ಟಿ ಬಂಗಾರ ಹಾಗೂ 6.5 ಲಕ್ಷ ರೂ. ಸೇರಿ ಒಟ್ಟು 18.50 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದರು.

Advertisement

ರೈಲ್ವೆ ಪೊಲೀಸರ ಭರ್ಜರಿ ಬೇಟೆ
ಹೌರಾದಿಂದ ವಾಸ್ಕೋ ಡ ಗಾಮಾ ಕಡೆಗೆ ಹೊರಟಿದ್ದ ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಗಿಸುತ್ತಿದ್ದ ಅಂದಾಜು 35.44 ಲಕ್ಷ ರೂ. ಮೌಲ್ಯದ 4 ಕೆಜಿ 300 ಗ್ರಾಂ ಗಾಂಜಾವನ್ನು ರೈಲ್ವೆ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಈ ವೇಳೆ ಗಾಂಜಾ ಸಾಗಾಟಗಾರರು
ಪರಾರಿಯಾಗಿದ್ದರು.

ರೌಡಿಶೀಟರ್‌ ಮೇಲೆ ಫೈರಿಂಗ್‌
ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಮಂಟೂರ ರಸ್ತೆಯ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಲು ಹೋದಾಗ, ಪಿಎಸ್‌ಐ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಆಗ ಶಹರ ಠಾಣೆ ಇನ್ಸ್‌ಪೆಕ್ಟರ್‌ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಪೊಲೀಸ್‌ಗೇ ಮಕ್ಮಲ್‌ ಟೋಪಿ
ಕೈಗೆಟಕುವ ದರದಲ್ಲಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದ ಅಪರಿಚಿತ ವ್ಯಕ್ತಿಯೊಬ್ಬ ನಗರದ ಪೊಲೀಸರೊಬ್ಬರಿಂದ 14.38 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದ.

ಲಾಕರ್‌ನಲಿದ್ದ ಆಭರಣಗಳೇ ಮಾಯ!
ಕೇಶ್ವಾಪುರ ರಸ್ತೆ ಕೆ.ಎಚ್‌. ಪಾಟೀಲ ರಸ್ತೆಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಹಾವೀರ ಕಾಲೋನಿಯ ಉದ್ಯಮಿಯೊಬ್ಬರು ಲಾಕರ್‌ನಲ್ಲಿ ಇರಿಸಿದ್ದ 56.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಕುರಿತು ಉದ್ಯಮಿ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಕ್ಕಳನ್ನೇ ಬಲಿ ಪಡೆದ ತಂದೆ
ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಮಕ್ಕಳ ಮೇಲೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ತಾನೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಸುಳ್ಳದಲ್ಲಿ ನಡೆಯಿತು. ಪತ್ನಿ ಮೇಲೆ ಸಂಶಯ ಪಡುತ್ತಿದ್ದ ವ್ಯಕ್ತಿ ಸುತ್ತಿಗೆಯಿಂದ ಹೊಡೆದು ಪತ್ನಿ-ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ. ಹಲ್ಲೆಯಿಂದ ಚಿಕಿತ್ಸೆ ಫಲಿಸದೇ ಮಕ್ಕಳು ಕಿಮ್ಸ್‌ನಲ್ಲಿ ಮೃತಪಟ್ಟಿದ್ದವು

ಪಡಿತರ ಅಕ್ಕಿ ಜಪ್ತಿ
ಕುಸುಗಲ್ಲ ರಸ್ತೆ ದುರ್ಗಾ ಕಾಲೋನಿ ಹತ್ತಿರದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6.71 ಲಕ್ಷ ರೂ. ಮೌಲ್ಯದ 600 ಚೀಲ ಅಕ್ಕಿ (292 ಕ್ವಿಂಟಾಲ್‌) ಜಪ್ತಿ ಮಾಡಿ ಮೂವರನ್ನು ಬಂಧಿಸಲಾಗಿತ್ತು. ನಗರದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುವ ಜಾಲವೇ ಇದ್ದು, ಆಹಾರ ಇಲಾಖೆ ಮತ್ತು ಪೊಲೀಸರು ಇದನ್ನು ನಿಯಂತ್ರಿಸಬೇಕಿದೆ.

*ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next