Advertisement

2022ರ ನೆನಪುಗಳ ಮೆರವಣಿಗೆ; ನವ ಭಾರತಕ್ಕೆ ದಶ ಯೋಜನೆಗಳು

10:56 AM Dec 28, 2022 | Team Udayavani |

ನವ ಭಾರತ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರ ಹಲವು ಯೋಜನೆಗಳನ್ನು 2022ರಲ್ಲಿ ಘೋಷಿಸಿವೆ. ಈ ಪೈಕಿ ನೂತನ ಯೋಜನೆಗಳು, ಕ್ರಮಗಳ ವಿವರ ಇಲ್ಲಿದೆ.

Advertisement

ಅಗ್ನಿಪಥ್‌ ಯೋಜನೆ
ಭಾರತದ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರಕಾರ ಅಗ್ನಿಪಥ್‌ ಯೋಜನೆಯನ್ನು ಹೊರತಂದಿದೆ. ಅಗ್ನಿಪಥ್‌ ಯೋಜನೆಯಡಿಯಲ್ಲಿ ಸೇನೆಯ ಮೂರೂ ವಿಭಾಗಗಳಲ್ಲಿ ಭಾರತೀಯ ಯುವಕ- ಯುವತಿಯರಿಗೆ “ಅಗ್ನಿವೀರ್‌’ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಒದಗಲಿದೆ. ಅಗ್ನಿವೀರರಿಗೆ ಉತ್ತಮ ವೇತನ ಮತ್ತು 4 ವರ್ಷಗಳ ಸೇವೆಯ ಬಳಿಕ ನಿರ್ಗಮನ ನಿವೃತ್ತಿ ಪ್ಯಾಕೇಜ್‌ ನೀಡಲಾಗುತ್ತದೆ.

ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆ
ಯೋಜನೆಯ ಭಾಗವಾಗಿ ದೇಶದ ಸೇನಾಪಡೆಗಳ ಅಧಿಕಾರಿಗಳು ಮತ್ತು ಸಿಬಂದಿಗೆ ನೀಡುವ ಪಿಂಚಣಿ ಮೊತ್ತ ಪರಿಷ್ಕರಿಸಲಾಗಿದೆ. ಇದರಿಂದಾಗಿ ಒಟ್ಟು 25.13 ಲಕ್ಷ ಮಂದಿ ನಿವೃತ್ತ ಯೋಧರು, ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗಲಿದೆ. ನಿವೃತ್ತರಾಗಿರುವ ಯೋಧರಿಗೆ ಪ್ರತೀ ತಿಂಗಳು 20,394 ರೂ., ನಾಯ್ಕ ಶ್ರೇಣಿಗೆ 21, 930 ರೂ., ಹವಾಲ್ದಾರ್‌ಗೆ 22, 294 ರೂ., ಬ್ರಿಗೇಡಿಯರ್‌ ಶ್ರೇಣಿಯ ನಿವೃತ್ತ ಅಧಿಕಾರಿಗೆ 1,12,596 ರೂ. ಪಿಂಚಣಿ ಸಿಗಲಿದೆ.

ಕಡುಬಡವರಿಗೆ ಉಚಿತ ಪಡಿತರ
ದೇಶದ ಅತ್ಯಂತ ಕಡು ಬಡವರಿಗೆ ಉಚಿತ ಪಡಿತರ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಯ ಅನ್ವಯ ಈ ಯೋಜನೆ ಜಾರಿಯಾಗಿದೆ. ಇದರಡಿ ದೇಶದ 81.35 ಕೋಟಿ ಮಂದಿ ಆಹಾರ ಧಾನ್ಯಕ್ಕೆ ಹಣ ನೀಡಬೇಕಾಗಿಲ್ಲ.

ಮೈಸೂರು-ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌
ದಕ್ಷಿಣದ ಮೊದಲ ಸೆಮಿ ಹೈಸ್ಪೀಡ್‌ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚರಿಸುತ್ತಿದೆ. ಇದು ದೇಶದ ಐದನೇ ವಂದೇ ಭಾರತ್‌ ರೈಲಾಗಿದೆ. ರೈಲನ್ನು ಚೆನ್ನೈಯ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ ಅಭಿವೃದ್ಧಿಪಡಿಸಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಇರುವ ಈ ರೈಲಿನಲ್ಲಿ ಉತ್ತಮ ವೇಗವರ್ಧನೆ ಮತ್ತು ಅತ್ಯಾಧುನಿಕ ಬ್ರೇಕಿಂಗ್‌ ಸಿಸ್ಟಮ್‌ ಅಳವಡಿಸಲಾಗಿದೆ. ಎಲ್ಲ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್‌ ಆಧಾರಿತ ಆಡಿಯೋ-ವೀಡಿಯೋ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಆನ್‌ಬೋರ್ಡ್‌ ಹಾಟ್‌ ಸ್ಪಾಟ್‌ ವೈ-ಫೈ ಮತ್ತು ಆರಾಮದಾಯಕ ಆಸನಗಳನ್ನು ಹೊಂದಿದೆ.

Advertisement

ಐಎಂಆರ್‌ ಹೆಲಿಕಾಪ್ಟರ್‌
ಭಾರತೀಯ ಸೇನಾ ಪಡೆಗಳಿಗಾಗಿ ಎಚ್‌ಎಎಲ್‌ ಕಂಪೆನಿಯು ದಿ ಇಂಡಿಯನ್‌ ಮಲ್ಟಿರೋಲ್‌ ಹೆಲಿಕಾಪ್ಟರ್‌ (ಐಎಂಆರ್‌ಎಚ್‌) ತಯಾರಿ ಸುತ್ತಿದೆ. ವಾಯು ದಾಳಿ ವಿರೋಧಿ, ಮಿಲಿಟರಿ ಸಾರಿಗೆ ಸಹಿತ ಬಹುವಿಧದಲ್ಲಿ ಈ ಹೆಲಿಕಾಪ್ಟರ್‌ಗಳು ಉಪಯೋಗವಾಗಲಿವೆ.

ಕವಚ್‌
ಎರಡು ರೈಲುಗಳ ನಡುವೆ ಮುಖಾಮುಖೀ ಢಿಕ್ಕಿ ತಪ್ಪಿಸಲು ಭಾರತೀಯ ರೈಲ್ವೇಯು “ಕವಚ್‌’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಎರಡು ರೈಲುಗಳು ವಿರುದ್ಧ ದಿಕ್ಕಿನಿಂದ ಬಂದರೂ ಎಷ್ಟೇ ವೇಗವಾಗಿ ರೈಲುಗಳು ಬರುತ್ತಿದ್ದರೂ ಎರಡೂ ರೈಲುಗಳು ರಕ್ಷಾ ಕವಚದಿಂದಾಗಿ ಢಿಕ್ಕಿಯಾಗುವುದಿಲ್ಲ. ಸ್ವಯಂಚಾಲಿತ ಬ್ರೇಕಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ.

ಇ-ರುಪಿ
ದೇಶದಲ್ಲಿ ಡಿಜಿಟಲ್‌ ಕರೆನ್ಸಿ ಜಾರಿಗೆ ತರುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್‌ ವೋಚರ್‌ ಆಧಾರಿತ ಡಿಜಿಟಲ್‌ ಪಾವತಿ ವ್ಯವಸ್ಥೆ “ಇ-ರುಪಿ’ ಜಾರಿಗೆ ಬಂದಿದೆ. ಇದು ನಗದುರಹಿತ ಮತ್ತು ಸಂಪರ್ಕವಿಲ್ಲದ ವ್ಯಕ್ತಿ-ನಿರ್ದಿಷ್ಟ ಮತ್ತು ಉದ್ದೇಶ-ನಿರ್ದಿಷ್ಟ ಪಾವತಿ ವ್ಯವಸ್ಥೆಯಾಗಿದೆ.

ಕರ್ನಾಟಕದಲ್ಲಿ ಯಶಸ್ವಿನಿ ಮರು ಜಾರಿ
ಕರ್ನಾಟಕ ಸರಕಾರ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿದೆ. ಈ ಯೋಜನೆಯಡಿ ಯಶಸ್ವಿನಿ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಸಹಕಾರಿ ಸಂಘಗಳ ಸದಸ್ಯರ 1ಕುಟುಂಬಕ್ಕೆ 5 ಲಕ್ಷ ರೂ.ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.

ಬಡವರಿಗಾಗಿ ನಮ್ಮ ಕ್ಲಿನಿಕ್‌
ಕೊಳೆಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕುವಂತೆ ಮಾಡಲು ಕರ್ನಾಟಕ ಸರಕಾರ “ನಮ್ಮ ಕ್ಲಿನಿಕ್‌’ ಆರಂಭಿಸಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 114 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ನಮ್ಮ ಕ್ಲಿನಿಕ್‌ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿವೆ. ರಾಜ್ಯದಲ್ಲಿ ಮತ್ತಷ್ಟು ಕ್ಲಿನಿಕ್‌ಗಳು ಆರಂಭವಾಗಲಿವೆ.

ಹರ್‌ ಘರ್‌ ತಿರಂಗಾ
ಅಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಪ್ರತೀ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ “ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಕೇಂದ್ರ ಸರಕಾರ ಕರೆ ನೀಡಿತು. ನಾಗರಿಕರು ಸ್ವಯಂ ಪ್ರೇರಣೆಯಿಂದ ತಮ್ಮ ಮನೆ‌ಗಳಲ್ಲಿ ತಿರಂಗಾ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next