ದತ್ತು ಕಮ್ಮಾರ
ಕೊಪ್ಪಳ: ಕೋವಿಡ್ ಮಹಾಮಾರಿ ಎಲ್ಲ ಕ್ಷೇತ್ರಗಳಿಗೆ ಸಂಕಷ್ಟ ತಂದಿಟ್ಟಿದೆ. ಸಾರ್ವಜನಿಕರ ಸೇವೆಯಲ್ಲಿ ತೊಡಗಿದ ಸಾರಿಗೆ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಕೊಪ್ಪಳ ಎನ್ಇಕೆಎಸ್ ಆರ್ಟಿಸಿ ಘಟಕವು ಕೋವಿಡ್ ಎರಡನೇ ಅಲೆಯಲ್ಲಿ ಬರೊಬ್ಬರಿ 20 ಕೋಟಿ ರೂ. ನಷ್ಟ ಅನುಭವಿಸಿದ್ದು, ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವುದಕ್ಕೆ ಘಟಕವು ತತ್ತರಿಸಿ ಹೋಗಿದೆ.
ಕೋವಿಡ್ ಮಹಾಮಾರಿ ಎರಡು ವರ್ಷಗಳಿಂದ ಎಲ್ಲೆಡೆಯೂ ಆರ್ಭಟಿಸುತ್ತಿರುವುದರಿಂದ ಜನರ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ. ಅದರಲ್ಲೂ ಸಾರ್ವಜನಿಕ ಸೇವೆಗೆ ಹೆಸರಾದ ಸಾರಿಗೆಯು ಕೊರೊನಾ ಆರ್ಭಟಕ್ಕೆ ನಲುಗಿ ಹೋಗಿದೆ. ಈ ಹಿಂದೆ ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ವೇಳೆ ಆಗಲೂ ಬಹುಪಾಲು ಬಸ್ಗಳೂ ಸಂಚಾರ ನಡೆಸಲಿಲ್ಲ. ಇದರಿಂದ ಘಟಕಗಳಿಗೆ ಆದಾಯವಿಲ್ಲದೇ ನಷ್ಟ ಅನುಭವಿಸಿದವು. ಆ ಬೆನ್ನಲ್ಲೇ ಕೋವಿಡ್ ಎರಡನೇ ಅಲೆಯು ಉಲ್ಬಣಿಸಿದ ಹಿನ್ನೆಲೆಯಲ್ಲಿ ಕಳೆದ ಏ. 28ರಿಂದಲೂ ಸಾರಿಗೆ ಸಂಚಾರವನ್ನು ಸರ್ಕಾರ ಬಂದ್ ಮಾಡಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದೆ.
ಪ್ರಸ್ತುತ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರೂ ಸಾರ್ವಜನಿಕ ವಲಯದ ಸಾರಿಗೆ ಸೇವೆ ಆರಂಭಿಸಲು ಸರ್ಕಾರ ಇನ್ನೂ ಮನಸ್ಸು ಮಾಡಿಲ್ಲ. ಸಾಮಾನ್ಯ ದಿನಗಳಲ್ಲಿ ಬಸ್ ಸಂಚಾರ ನಡೆಸಿದರೆ ಜಿಲ್ಲೆಯಲ್ಲಿನ ವಿಭಾಗೀಯ ಘಟಕಕ್ಕೆ ಪ್ರತಿದಿನವೂ 40 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಂಚಾರ ಸೇವೆ ಬಂದ್ ಆಗಿದ್ದರಿಂದ ಈ ವರೆಗೂ ವಿಭಾಗೀಯ ಘಟಕಕ್ಕೆ ಮಂಗಳವಾರದ ಅಂತ್ಯಕ್ಕೆ ಬರೊಬ್ಬರಿ 20 ಕೋಟಿ ರೂ. ನಷ್ಟ ಅನುಭವಿಸಿವೆ.
ಸಾರಿಗೆ ಘಟಕ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದು, ಕೊರೊನಾ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಇದರಿಂದ ಕೊಪ್ಪಳ ಘಟಕ ತತ್ತರಿಸಿ ಹೋಗಿದ್ದು, ಆರ್ಥಿಕ ವ್ಯವಸ್ಥೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ಅಧಿ ಕಾರಿಗಳಿಗೆ ಚಿಂತೆಯಾಗಿದೆ.
ಸಾರಿಗೆ ಘಟಕ, ಕೊಪ್ಪಳ ,ಎನ್ಇಕೆಎಸ್ ಆರ್ಟಿಸಿ, ಕೊರೊನಾ