Advertisement

ಘನಘೋರ ಸುಳ್ವಾಡಿ ದುರಂತಕ್ಕೆ 2 ವರ್ಷ: ಏನಿದು ಘಟನೆ ? ಮನಕಲಕುವಂತಿದೆ ಭಾಧಿತರ ಪರಿಸ್ಥಿತಿ !

12:22 PM Dec 14, 2020 | Mithun PG |

ಹನೂರು (ಚಾಮರಾಜನಗರ): ದೇಶವೇ ಬೆಚ್ಚಿ ಬಿದ್ದಿದ್ದಂತಹ ಘನಘೋರ ದುರಂತಕ್ಕೆ  2 ವಸಂತಗಳು ಕಳೆದಿದ್ದರೂ ಇನ್ನೂ ಸಹ ಸಂತ್ರಸ್ಥರು ಮತ್ತು ಬಾಧಿತರು ಈ ನೋವಿನ ಕರಾಳ ನೆನೆಪಿನಿಂದ ಹೊರಬರಲಾಗದೆ, ಜನರ ಮನಸ್ಸಿನಿಂದ ಮಾಸದೆ ಘೋರ ನೆನಪಿನಲ್ಲಿಯೇ ಪರಿತಪಿಸುವಂತಾಗಿದೆ.

Advertisement

ಡಿ.14 2018ರ ದಿನ ದೇಶದ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಘನಘೋರ ದುರಂತ ಜರುಗಿ 17 ಜನ ಮೃತಪಟ್ಟು 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಸಾವು-ಬದುಕಿನ ನಡುವೆ ಸೆಣಸುವಂತಾಂಗಿತ್ತು.

ಏನಿದು ಘಟನೆ?:

ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದ ಆದಾಯ ಬರುತಿತ್ತು. ಈ ಆದಾಯದಿಂದಲೇ ದೇವಾಲಯದ ಆಡಳಿತ ಮಂಡಳಿಯಲ್ಲಿ ಕೆಲ ಗೊಂದಲಗಳು ನಿರ್ಮಾಣವಾಗಿ ಮಂಡಳಿ ಇಬ್ಬಾಗವಾಗಿತ್ತು. ಇದೇ ವೇಳೆ ನೂತನವಾಗಿ ಗೋಪುರ ನಿರ್ಮಾಣ ಮಾಡುವ ಸಂಬಂಧ ಡಿ.14 2018ರಂದು ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು. ಈ ವೇಳೆ ದೇವಾಲಯದ ಆಡಳಿತ ಮಂಡಳಿಯ ಕೆಲ ಸದಸ್ಯರು ಈ ನಿರ್ಧಾರದಿಂದ ಬೇಸತ್ತು ಹೇಗಾದರೂ ಮಾಡಿ ಈ ಗೋಪುರ ನಿರ್ಮಾಣ ಕಾಮಗಾರಿಯನ್ನು ತಡೆಹಿಡಿಯಬೇಕು ಎನ್ನುವ ಉದ್ದೇಶದಿಂದ  ಆ ದಿನ ದೇವಾಲಯದಲ್ಲಿ ತಯಾರಿಸಲಾಗುತ್ತಿದ್ದ ಪ್ರಸಾದಕ್ಕೆ ಕ್ರಿಮಿನಾಶಕವನ್ನು ಮಿಶ್ರಣ ಮಾಡಿದ್ದರು.

17ಜನ ಮೃತಪಟ್ಟು, 120ಕ್ಕೂ ಹೆಚ್ಚು ಜನ ಅಸ್ವಸ್ಥ:

Advertisement

ದೇವಾಲಯದಲ್ಲಿ ಶಂಕುಸ್ಥಾಪನಾ ಕಾರ್ಯಕ್ರಮ ಜರುಗಿದ ಬಳಿಕ 10:30ರ ವೇಳೆಗೆ ಸ್ಥಳದಲ್ಲಿದ್ದ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಗಿತ್ತು. ಭಕ್ತಾದಿಗಳಿಗೆ ನೀಡಿದ್ದ ಪ್ರಸಾದಕ್ಕೆ  ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಹಿನ್ನೆಲೆ, ಪ್ರಸಾದ ಸೇವಿಸಿದ ಕೆಲ ಹೊತ್ತಿನಲ್ಲೇ ಎಲ್ಲಾ ಭಕ್ತಾದಿಗಳು ಅಸ್ವಸ್ಥಗೊಂಡಿದ್ದರು. ಬಳಿಕ ಅಸ್ವಸ್ಥರನ್ನು ಆಂಬುಲೆನ್ಸ್, ಸರಕು ಸಾಗಾಟ ವಾಹನ, ದ್ವಿಚಕ್ರ ವಾಹನಗಳ ಮೂಲಕ ಆಸ್ಪತ್ರೆಗಳಿಗೆ ರವಾನಿಸುವ ಕಾರ್ಯ ಜರುಗಿ ಕೆಲ ಸಂತ್ರಸ್ತರಿಗೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ, ಮತ್ತು ಕೆಲವರಿಗೆ ಕೊಳ್ಳೇಗಾಲ ಉಪವಿಭಾಗದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಯಿತು. ಆದರೂ ಘಟನೆಯಿಂದಾಗಿ 17 ಜನ ಅಮಾಯಕ ಭಕ್ತಾದಿಗಳು ಮೃತಪಟ್ಟು, 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಕೇವಲ ಮನುಷ್ಯರು ಮಾತ್ರವಲ್ಲದೆ ಪ್ರಸಾದದ ಅನ್ನದ ಅಗುಳನ್ನು ಸೇವಿಸಿದ್ದ 70ಕ್ಕೂ ಹೆಚ್ಚು ಕಾಗೆಗಳೂ ಕೂಡ ಮೃತಪಟ್ಟಿದ್ದವು.

ಒಂದೇ ವಾರದಲ್ಲಿ ಪ್ರಕರಣ ಭೇಧಿಸಿದ ಪೊಲೀಸರು: 

ಘಟನೆಯಿಂದಾಗಿ ಒಂದೆಡೆ ದಿನದಿಂದ ದಿನಕ್ಕೆ ಮೃತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಇತ್ತ ಪ್ರಕರಣವನ್ನು ಭೇಧಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಪ್ರಕರಣವನ್ನು ಶೀಘ್ರವಾಗಿ ಭೇಧಿಸಲೇ ಬೇಕು ಎಂಬ ಹಠಕ್ಕೆ ಬಿದ್ದ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ 5 ತನಿಖಾ ತಂಡಗಳನ್ನು ರಚಿಸಿದ್ದರು.

ಈ ವೇಳೆಗೆ ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ಹಿನ್ನೆಲೆ ದೊರೆತ ಮಾಹಿತಿ ಮೇರೆಗೆ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾದರು. ಬಳಿಕ ಸಾಲೂರು ಬೃಹನ್ಮಠದ ಕಿರಿಯ ಶ್ರೀಗಳಾಗಿದ್ದ ಇಮ್ಮಡಿ ಮಹದೇವಸ್ವಾಮಿಗಳ ಕುಮ್ಮಕ್ಕಿನಿಂದಲೇ ಪ್ರಸಾದಲ್ಲಿ ಕ್ರಿಮಿನಾಶಕ ಮಿಶ್ರಣ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿತ್ತು. ಬಳಿಕ ರಾಮಾಪುರ ಪೊಲೀಸರು ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಮ್ಮಡಿ ಮಹದೇವಸ್ವಾಮಿಯನ್ನು ಎ1 ಆರೋಪಿಯನ್ನಾಗಿಸಿ, ಇತನ ಕೃತ್ಯಕ್ಕೆ ಸಹಕರಿಸಿದ್ದ ಮಾದೇಶ್, ಅಂಬಿಕಾ ಮತ್ತು ದೊಡ್ಡಯ್ಯ ಅವರನ್ನು ಆರೋಪಿಗಳನ್ನಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಸುಪ್ರೀಂ ಕದ ತಟ್ಟಿದರೂ ದೊರಕದ ಜಾಮೀನು: 

ವಿಷಪ್ರಸಾದ ಪ್ರಕರಣದ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಬಳಿಕ ಸುಪ್ರೀಂ ಮೊರೆ ಹೋದರೂ ಜಾಮೀನು ದೊರಕದೆ ಪ್ರಕರಣದ 4 ಆರೋಪಿಗಳು ಮೈಸೂರು ಜೈಲಿನಲ್ಲಿಯೇ ಕಾಲದೂಡುವಂತಾಗಿದೆ.

22 ತಿಂಗಳುಗಳ ಬಳಿಕ ತೆರೆದ ದೇವಾಲಯ: 

ಈ ಕರಾಳ ಘಟನೆಯ ಬಳಿಕ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯಕ್ಕೆ ತಾಲೂಕು ಆಡಳಿತ ಬೀಗಮುದ್ರೆ ಹಾಕಿತು. ಬಳಿಕ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ಪಡೆದು ಮತ್ತೆ ದೇವಾಲಯವನ್ನು ಅ. 24 ರಿಂದ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಅಲ್ಲಿಗೆ ಬರೋಬ್ಬರಿ 22 ತಿಂಗಳುಗಳ ಕಾಲ ಪೂಜಾ ಕೈಂಕರ್ಯ ಸ್ಥಗಿತಗೊಂಡಿತ್ತು. ಇದೀಗ ದೇವಾಲಯ ತೆರೆದಿದ್ದರೂ ಕೂಡ ಅಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಕೋವಿಡ್19 ನಿಯಮಾವಳಿಗಳೂ ಜಾರಿಯಲ್ಲಿರುವುದರಿಂದ ತೀರ್ಥ ಪ್ರಸಾದವನ್ನೂ ನಿರ್ಬಂಧಿಸಲಾಗಿದೆ. ಈ ಹಿಂದೆ ಭಕ್ತಾದಿಗಳು ನೆರವೇರಿಸುತ್ತಿದ್ದ ಪರ ಸೇವೆಯನ್ನೂ ಸಹ ಸ್ಥಗಿತಗೊಳಿಸಲಾಗಿದೆ.

ಇನ್ನೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಬಾಧಿತರು:

ಪ್ರಕರಣದಲ್ಲಿ ಭಾಗಿಯಾಗಿದ್ದ ಅಸ್ವಸ್ಥ 120 ಜನರ ಪೈಕಿ ಹಲವಾರು ಜನ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ದೃಷ್ಠಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನು ಕೆಲವರು ಹೊಟ್ಟೆಉರಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಬಿಸಿಲಿನ ತಾಪಕ್ಕೆ ಬಂದಲ್ಲಿ ಆಯಾಸಗೊಂಡು ಬೀಳುವಂತಹ ಪರಿಸ್ಥಿತಿಯಿದೆ. ಈ ರೀತಿಯ ಸಮಸ್ಯೆ ಉಳ್ಳವರು ಜೀವನ ಸಾಗಿಸಲು ಕೂಲಿ ಕೆಲಸಕ್ಕೂ ತೆರಳಲಾಗದೆ ಸಂಕಷ್ಟದಲ್ಲಿಯೇ ಜೀವನ ದೂಡುವಂತಾಗಿದೆ.  ಇನ್ನು ಮೃತರ ಕುಟುಂಬಸ್ಥರಿಗೆ ಸರ್ಕಾರ ನೀಡಿದ ಆರ್ಥಿಕ ನೆರವಿನಲ್ಲಿ ಹಲವರು ಈ ಹಿಂದೆ ತಾವು ಮಾಡಿಕೊಂಡಿದ್ದ ಕೈ ಸಾಲವನ್ನು ತೀರಿಸಿ ಉಳಿದ ಹಣದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ವಿತರಣೆಯಾಗದ ನಿವೇಶನ ಹಕ್ಕು ಪತ್ರ: 

ಘಟನೆಯಿಂದಾಗಿ ಮೃತಪಟ್ಟವರ ಕುಟುಂಬಸ್ಥರು ಮತ್ತು ಸಂತ್ರಸ್ಥರ ಪೈಕಿ ಸ್ವಂತ ಮನೆ ಮತ್ತು ನಿವೇಶನವಿಲ್ಲದ 58 ಜನರ ಹೆಸರನ್ನು ಗುರುತಿಸಲಾಗಿತ್ತು. ಇದೀಗ ಇದರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಕಂದಾಯ ಇಲಾಖಾವತಿಯಿಂದ ಬಿದರಹಳ್ಳಿ ಸರ್ವೆ ನಂ 47ರ  2 ಎಕರೆ ಜಾಗವನ್ನು ಗುರುತಿಸಿ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವಶಕ್ಕೆ ನೀಡಲಾಗಿದೆ. ಇದೀಗ ಗ್ರಾ.ಪಂ ವತಿಯಿಂದ ಬಡಾವಣೆಯ ನಕ್ಷೆ ಸಿದ್ಧಗೊಳಿಸಿ ನಿವೇಶನಗಳನ್ನು ವಿಭಜಿಸಿ ಹಕ್ಕುಪತ್ರಗಳ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸಬೇಕಿದೆ.

ಭರವಸೆಯಾಗಿಯೇ ಉಳಿದ ಜಮೀನು ವಿತರಣೆ:

ಘಟನೆಯಿಂದ ಮೃತಪಟ್ಟ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 2 ಎಕರೆ ಜಮೀನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈ ಭಾಗದಲ್ಲಿ ಸೂಕ್ತ ಸರ್ಕಾರಿ ಜಮೀನು ಲಭ್ಯವಿಲ್ಲದ ಹಿನ್ನೆಲೆ ಮತ್ತು ಸರ್ಕಾರದ ಮಾರ್ಗಸೂಚಿಯನ್ವಯ ಖರೀದಿ ದರಕ್ಕೆ ಜಮೀನು ದೊರಕದ ಹಿನ್ನೆಲೆ  ಜಮೀನು ನೀಡುವ ಭರವಸೆ ಭರವಸೆಯಾಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next