Advertisement

ಪುತ್ತೂರು ಚಪ್ಪಲಿ ಹಾರ ಪ್ರಕರಣ: ರಾಜಕೀಯ ವಾಕ್ಸಮರ ಶುರು, ಪುತ್ತೂರಿಗೆ ಯತ್ನಾಳ್‌

12:04 PM May 19, 2023 | Team Udayavani |

ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಘಟನೆಯಲ್ಲಿ ಭಾಗಿಯಾಗಿರುವ ಆರೋಪದಡಿ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತು ಮಾಡಲಾಗಿದೆ.

Advertisement

ಸಂಪ್ಯ ಠಾಣೆಯ ಪಿಎಸ್‌ಐ ಶ್ರೀನಾಥ್‌ ರೆಡ್ಡಿ, ಕಾನ್ಸ್ ಸ್ಟೆಬಲ್‌ ಹರ್ಷಿತ್‌ ಅಮಾನತುಗೊಂಡವರು. ಪ್ರಕರಣಕ್ಕೆ
ಸಂಬಂಧಿಸಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ವೀರಯ್ಯ ಹಿರೇಮಠ ವಿರುದ್ಧವೂ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿ ಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ತಿಳಿಸಿದ್ದಾರೆ.

ಪ್ರಕರಣ ದಾಖಲು: ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಫೋಟೋ ಬಳಸಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಚಪ್ಪಲಿ ಹಾರ ಹಾಕಿ ಬ್ಯಾನರ್‌ ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 9 ಮಂದಿ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ಚಿತ್ರ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತಿದ್ದಂತೆ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ದೌರ್ಜನ್ಯಕ್ಕೊಳಗಾದ ಯುವಕ ಅವಿನಾಶ್‌ ಅವರ ತಂದೆ ವೇಣುನಾಥ ನರಿಮೊಗರು ಮೇ 17ರಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಡಿವೈಎಸ್‌ಪಿ, ಸಂಪ್ಯ ಠಾಣೆಯ ಪಿಎಸ್‌ಐ ಮತ್ತು ಪಿಸಿಯೊಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಪಿ ಭೇಟಿ-ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಡಾ| ವಿಕ್ರಂ ಅಮ್ಟೆ ಮತ್ತು ಅಡಿಷನಲ್‌ ಎಸ್ಪಿ ಕುಮಾರ್‌ ಅವರು ಪುತ್ತೂರು ಡಿವೈಎಸ್ಪಿ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಹೆಚ್ಚಿನ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿಗೆ ವಹಿಸಲಾಗಿದೆ. ಈ ನಡುವೆ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ವಿಚಾರಣೆ ವರದಿ ಆಧಾರದ ಮೇಲೆ ಪಿಎಸ್‌ಐ ಮತ್ತು ಪಿಸಿಯನ್ನು ತತ್‌ಕ್ಷಣಕ್ಕೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಭರವಸೆ ನೀಡಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು, ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳು ಮತ್ತು ಆರೋಪಿಗಳವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

Advertisement

ಅಂತಹ ಕಾನೂನುಬಾಹಿರ ಮತ್ತು ಅನಗತ್ಯ ಕ್ರಮಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ. ಅಮಾನತಿಗೆ ಶಾಸಕರ ಸೂಚನೆ: ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮತ್ತು ದೌರ್ಜನ್ಯದಲ್ಲಿ ಭಾಗಿಯಾದ ಪೊಲೀಸರನ್ನು ಗುರುವಾರ ಸಂಜೆಯೊಳಗೆ ಅಮಾನತು ಮಾಡಬೇಕು ಎಂದು ಬೆಂಗಳೂರಿನಲ್ಲಿರುವ ಪುತ್ತೂರಿನ ನೂತನ ಶಾಸಕ ಅಶೋಕ್‌ ಕುಮಾರ್‌ ರೈ ಪೊಲೀಸ್‌ ಇಲಾಖೆಗೆ ಸೂಚಿಸಿದ್ದು, ಕೂಡಲೇ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದರು.

ದಯವಿಟ್ಟು ನಮ್ಮನ್ನು ಕ್ಷಮಿಸಿ: ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರಲ್ಲಿ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ಟ್ವೀಟ್‌ ಮೂಲಕ ಕ್ಷಮೆ ಯಾಚಿಸಿದ್ದಾರೆ. ನಮ್ಮ ಪರವಾಗಿ ಮತ ಕೇಳುವ, ಬ್ಯಾನರ್‌, ಬಂಟಿಂಗ್‌ ಕಟ್ಟುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗೂ ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕು ಇರುತ್ತದೆ. ಘಟನೆಗೆ ಸಂಬಂಧಿಸಿದಂತೆ ಪಕ್ಷ ಸೋತಾಗ ಅನಾಥನಾಗುವುದು, ಅಪಾಯಕ್ಕೆ ಸಿಲುಕುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಟ್ವೀಟಿನಲ್ಲಿ ಬರೆದುಕೊಂಡಿದ್ದಾರೆ.

ಹಲವರ ಭೇಟಿ-ಖಂಡನೆ: ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌, ಸಂಘ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಮುಖಂಡರಾದ ಆಶಾ ತಿಮ್ಮಪ್ಪ ಗೌಡ, ಕಿಶೋರ್‌ ಬೊಟ್ಯಾಡಿ, ಮುರಳಿಕೃಷ್ಣ ಹಸಂತಡ್ಕ, ಕೃಷ್ಣ ಶೆಟ್ಟಿ ಕಡಬ ಮೊದಲಾದವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರವಾಣಿ ಮೂಲಕ ಯೋಗಕ್ಷೇಮ ವಿಚಾರಿಸಿದ್ದಾರೆ. ಪುತ್ತೂರು ಹಿಂದೂ ಸೇನೆ, ಹಿಂದೂ ಜಾಗರಣ ವೇದಿಕೆ ಘಟನೆಯನ್ನು ಖಂಡಿಸಿದೆ.

ಇಂದು ಪುತ್ತೂರಿಗೆ ಯತ್ನಾಳ್‌
ಹಿಂದೂ ಕಾರ್ಯಕರ್ತರ ಯೋಗಕ್ಷೇಮ ಮತ್ತು ಪ್ರಕರಣದ ಕುರಿತು ಮಾಹಿತಿ ಪಡೆಯಲು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮೇ 19ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಯತ್ನಾಳ್‌ ಅವರು ಅರುಣ್‌ ಕುಮಾರ್‌ ಪುತ್ತಿಲರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದು ಘಟನೆಯ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.

ಘಟನೆಯ ಬಗ್ಗೆ ಅಡಿಶನಲ್‌ ಎಸ್‌ಪಿ ನೇತೃತ್ವದಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಿ ವಿಚಾರಣೆ ನಡೆಸಿ, ಇಬ್ಬರ ಅಮಾನತು ಮಾಡಲಾಗಿದೆ. ಹಲ್ಲೆಗೊಳಗಾದವರು ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದು ಅದರ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಬಂಟ್ವಾಳ ಸಬ್‌ ಡಿವಿಜನ್‌ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಲಾಗಿದ್ದು ಎಲ್ಲ ಮಾಹಿತಿಯನ್ನು ಇಲಾಖಾ ಶಿಸ್ತು ಪ್ರಾಧಿಕಾರಕ್ಕೆ ಕಳುಹಿಸಿಕೊಡುತ್ತೇವೆ.
● ವಿಕ್ರಮ ಅಮ್ಟೆ, ಪೊಲೀಸ್‌ ವರಿಷ್ಠಾಧಿಕಾರಿ ದ.ಕ

ಸರಕಾರ ಬದಲಾದ ತಕ್ಷಣ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಈ ಘಟನೆ ಉದಾಹರಣೆ. ಕಾರ್ಯಕರ್ತರ ಮೇಲಿನ ಪೊಲೀಸ್‌ ದೌರ್ಜನ್ಯ ನೂರಕ್ಕೆ ನೂರು ಕಾಂಗ್ರೆಸ್‌ ಮಾಡಿದ ಕಿತಾಪತಿ. ನಾವು ಇದನ್ನು ಹೀಗೆ ಬಿಡುವುದಿಲ್ಲ. ಇದರ ಹಿಂದಿನ ಶಕ್ತಿ
ಯಾರೆಂದು ಗೊತ್ತಾಗಬೇಕು. ಸರಕಾರ ಬದಲಾದ ಕೂಡಲೇ ಇಂತಹ ಘಟನೆ ಒಳ್ಳೆಯ ಲಕ್ಷಣ ಅಲ್ಲ.
●ಡಾ| ಪ್ರಭಾಕರ ಭಟ್‌ ಕಲ್ಲಡ್ಕ,
ಸಂಘ ಪರಿವಾರದ ಮುಖಂಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next