Advertisement

ಉಡುಪಿ ಅಜ್ಜರಕಾಡಿನಲ್ಲಿ 18ನೇ ರಾಷ್ಟ್ರೀಯ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ ಶಿಪ್‌ಗೆ ಚಾಲನೆ

11:54 PM Mar 10, 2023 | Team Udayavani |

ಉಡುಪಿ: ಮುಂದಿನ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಉಡುಪಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ ವೇದಿಕೆಯಾಗಲಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತ ಅಗ್ರ 5ರಲ್ಲಿ ಬರುವ ವಿಶ್ವಾಸವಿದ್ದು, ಅಷ್ಟರಮಟ್ಟಿಗೆ ನಮ್ಮ ಯುವ ಕ್ರೀಡಾಳುಗಳು ಸಾಧನೆ ಮಾಡುತ್ತಿದ್ದಾರೆ ಎಂದು ಎಂದು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಶ್ಲಾಘಿಸಿದರು.

Advertisement

ಆ್ಯತ್ಲೆಟಿಕ್‌ ಫೆಡರೇಶನ್‌ ಆಫ್ ಇಂಡಿಯಾ, ಕರ್ನಾಟಕ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಹಾಗೂ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಆಶ್ರಯದಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಾ. 10ರಿಂದ 12ರ ವರೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ 18ನೇ ರಾಷ್ಟ್ರೀಯ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಉಜ್ಬೆಕಿಸ್ಥಾನದಲ್ಲಿ ನಡೆಯಲಿರುವ ಏಷ್ಯನ್‌ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಅರ್ಹತೆ ಪಡೆಯಲಿ ಎಂದು ಆಶಿಸಿದರು.

ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ದೇಶದ ಕ್ರೀಡಾ ಕ್ಷೇತ್ರದ ದಿಕ್ಕು ಬದಲಾಗಿದ್ದು, ಅಗತ್ಯ ಸೌಲಭ್ಯ, ಮೂಲ ಸೌಕರ್ಯ ವ್ಯವಸ್ಥಿತವಾಗಿ ನೀಡಲಾಗುತ್ತಿದೆ. ಜಾಗತಿಕ ಮಟ್ಟದ ಕ್ರೀಡೆಗಳಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಧಾರ್ಮಿಕ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಜಿಲ್ಲೆಯೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕ್ರೀಡಾಕೂಟಗಳಿಗೆ ಮಾಹೆ ನಿರಂತರ ಬೆಂಬಲ ನೀಡುತ್ತದೆ ಎಂದರು.

Advertisement

ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್‌ ಮಾತನಾಡಿ, ಕ್ರೀಡಾಪಟುಗಳು ಶ್ರೇಷ್ಠ ಸಾಧನೆ ತೋರುವ ಮೂಲಕ ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂದು ಹಾರೈಸಿದರು.

ನಿಟ್ಟೆ ಎಜುಕೇಷನ್‌ ಟ್ರಸ್ಟ್‌ ನಿರ್ದೇಶಕ ಯೋಗೀಶ್‌ ಹೆಗ್ಡೆ, ಎಎಫ್ಐನ ಸತೀಶ್‌ ಉಚ್ಚಿಲ್‌, ಕಾರ್ಕಳ ಎಪಿಜಿಇಟಿ ಅಧ್ಯಕ್ಷ ಡಾ| ಸುಧಾಕರ್‌ ಶೆಟ್ಟಿ, ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಗೌ. ಸಲಹೆಗಾರ ಅಶೋಕ್‌ ಅಡ್ಯಂತಾಯ, ಅಧ್ಯಕ್ಷ ಡಾ| ಕೆಂಪರಾಜ್‌ ಎಚ್‌.ಬಿ., ಎನ್‌ಇಬಿ ನ್ಪೋರ್ಟ್ಸ್ ಸಿಎಂಡಿ ನಾಗರಾಜ್‌ ಅಡಿಗ, ಹೊಂಬಾಳೆ ಗ್ರೂಪ್‌ ನಿರ್ದೇಶಕಿ ಶೈಲಜಾ ವಿಜಯ್‌ ಕಿರಂಗದೂರು, ಕೆಎಎ ಹಿರಿಯ ಉಪಾಧ್ಯಕ್ಷ ಎಚ್‌. ಟಿ. ಮಹಾದೇವ್‌, ಕಾರ್ಯದರ್ಶಿ ರಾಜವೇಲು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಮಾಹೆ ಕ್ರೀಡಾ ಪರಿಷತ್‌ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌ ಉಪಸ್ಥಿತರಿದ್ದರು. ಯುಡಿಎಎಎ ಕಾರ್ಯದರ್ಶಿ ಎ.ದಿನೇಶ್‌ ಕುಮಾರ್‌ ಸ್ವಾಗತಿಸಿ, ಖಚಾಂಚಿ ದೀಪಕ್‌ ರಾಮ್‌ ಬಾಯರಿ ವಂದಿಸಿ, ಅನುರಾಗ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next