Advertisement

1.66 ಕೋ.ರೂ. ಉಳಿತಾಯ ಬಜೆಟ್‌

07:55 AM Feb 22, 2019 | Team Udayavani |

ಹರಿಹರ: ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ 2019-20ನೇ ಸಾಲಿನ ಬಜೆಟ್‌ ಸಭೆಯಲ್ಲಿ ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ 1.66 ಕೋಟಿ ರೂ. ಉಳಿತಾಯದ ಬಜೆಟ್‌ ಮಂಡಿಸಿದರು.

Advertisement

ಸದಸ್ಯ ಶಂಕರ್‌ ಖಟಾವ್‌ಕರ್‌, ಕಟ್ಟಡ ಪರವಾನಿಗೆ ಪಡೆಯಲು ಇರುವ ತೊಂದರೆ ನಿವಾರಿಸಿದರೆ ಆದಾಯ ಹೆಚ್ಚಾಗುತ್ತದೆ. ಬೀದಿ ದೀಪ ಕೊರತೆಯಿಂದ ನಗರದ ಬಹುಭಾಗ ಕತ್ತಲಲ್ಲಿದೆ. ಹೊಸ ಅಧಿಕಾರಿಗಳ ಆಗಮನದಿಂದ ಕಂದಾಯ ಶಾಖೆ ಸಿಬ್ಬಂದಿ ಜನರಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ನಾಗರಾಜ್‌ ಮೆಹರ್ವಾಡೆ ಮಾತನಾಡಿ, ನದಿ ಬಿಟ್ಟು ಇನ್ನೊಂದು ನೀರಿನ ಮೂಲಕ್ಕೆ ಹಣ ಇಟ್ಟಿಲ್ಲ. ಎಲ್‌ಇಡಿ ಬದಲು ಟ್ಯೂಬ್‌ ಲೈಟ್‌ ಬೀದಿ ದೀಪಕ್ಕೆ ಉಪಯುಕ್ತ. ವಿದ್ಯಾನಗರ ಪಾರ್ಕ್‌ ಅಭಿವೃದ್ಧಿಯಾಗಬೇಕು ಎಂದರು. ನಾಗರಾಜ್‌ ರೋಖಡೆ, ಅಗನಸಕಟ್ಟೆ ಕೆರೆ ಡಿಪಿಆರ್‌ಗೆ 20 ಲಕ್ಷ ನೀಡಬೇಕು. 2ನೇ ವಾರ್ಡಿನಲ್ಲಿ ಪಾರ್ಕ್‌ ಅಭಿವೃದ್ಧಿಪಡಿಸಬೇಕು ಎಂದರೆ, ಡಿ.ಜಿ.ರಘುನಾಥ್‌, ಹತ್ತಿಪ್ಪತ್ತು ವರ್ಷಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿ, ಸಿಬ್ಬಂದಿಗೆ ಗೇಟ್‌ ಪಾಸ್‌ ನೀಡಿರುವುದು ಸೂಕ್ತವಾಗಿದೆ ಎಂದರು.

ಬಿ.ರೇವಣಸಿದ್ದಪ್ಪ, 40 ಲಕ್ಷದ ಬದಲು ಮಳಿಗೆಗಳ ಬಾಡಿಗೆಯ ಆದಾಯ 1 ಕೋಟಿ ರೂ. ದಾಟಬೇಕು ಎಂದರೆ, ಬಿ.ಮೊಹ್ಮದ್‌ ಸಿಗ್ಬತ್‌ ಉಲ್ಲಾ, ಜಲಸಿರಿ ಪೈಪ್‌ ರಸ್ತೆಯ ಒಂದು ಬದಿ ಬದಲು ಎರಡೂ ಬದಿ ಅಳವಡಿಸಬೇಕು. ಆಶ್ರಯ ಮನೆಗಳಾಗಬೇಕು ಎಂದು ಆಗ್ರಹಿಸಿದರು. 

ಕೆ.ಮರಿದೇವ, ಕ್ರೀಡಾಪಟುಗಳಿಗೆ ಸಹಾಯಧನ ಮೊತ್ತವನ್ನು 1 ಲಕ್ಷದ ಬದಲು 10 ಲಕ್ಷ ರೂ. ನಿಗದಿ ಮಾಡಬೇಕೆಂದರೆ, ಎಸ್‌.ಎಂ. ವಸಂತ್‌, ಎರಡು ಪೂರ್ವಭಾವಿ ಸಭೆ ಮಾಡಿ ಎಚ್ಚರಿಕೆಯಿಂದಲೇ ಬಜೆಟ್‌ ಸಿದ್ಧಪಡಿಸಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಚಿಕ್ಕ ಮಳಿಗೆಗಳ ಸಂಕೀರ್ಣ ನಿರ್ಮಿಸಬೇಕು. ನಗರದ 23 ಪಾರ್ಕ್‌ಗಳ ಅಭಿವೃದ್ಧಿಗೆ ಕೆಆರ್‌ಡಿಎಲ್‌ನವರಿಗೆ ಶಾಸಕರು ಸೂಚಿಸಿದ್ದಾರೆ ಎಂದರು.

Advertisement

ಬಿ.ಕೆ.ಸೈಯದ್‌ ರಹಮಾನ್‌, ಇಲ್ಲಿರುವ ವಿದ್ಯುತ್‌ ಎಂಜಿನಿಯರ್‌ ಶ್ವೇತಾ ಏನೂ ಉಪಯೋಗವಿಲ್ಲ. ಕಚೇರಿಗೆ ಬರುವುದೇ ಅಪರೂಪ ಎಂದಾಗ ಧ್ವನಿಗೂಡಿಸಿದ ನಗೀನಾ ಸುಭಾನ್‌ಸಾಬ್‌, ಕಚೇರಿಗೆ ಬಂದರೂ ಮೊಬೈಲ್‌ನಲ್ಲಿ ಕಾಲಕಳೆಯುತ್ತಾರೆ ಎಂದು ಆರೋಪಿಸಿದರು.

ಆರಂಭದಲ್ಲೇ ಸದಸ್ಯ ಸೈಯದ್‌ ಏಜಾಜ್‌, ಬಜೆಟ್‌ ಸಭೆಗೆ 7 ದಿನ ಮುಂಚೆ ನೋಟಿಸ್‌ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿ ಹೊರನಡೆದರು. ಉಪಾಧ್ಯಕ್ಷೆ ಅಂಜಿನಮ್ಮ, ಪೌರಾಯುಕ್ತೆ ಎಸ್‌.ಲಕ್ಷ್ಮಿ, ರತ್ನಮ್ಮ, ಹಜರತ್‌ ಅಲಿ, ಎಂ.ಅಲ್ತಾಫ್‌, ವಿರುಪಾಕ್ಷಿ, ಅಂಬುಜಾ ರಾಜೊಳ್ಳಿ, ಪ್ರತಿಭಾ ಪಾಟೀಲ್‌, ನಗೀನಾ ಸುಭಾನ್‌ಸಾಬ್‌ ಇತರರಿದ್ದರು. ಸಭೆಗೂ ಮುನ್ನ ಹುತಾತ್ಮ ಯೋಧರಿಗೆ ಒಂದು ನಿಮಿಷ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಪ್ರಮುಖ ವೆಚ್ಚಗಳು
ಕೊಳವೆ ಬಾವಿ, ಕಿರು ನೀರು, ಶುದ್ಧ ಕುಡಿಯುವ ನೀರು ಘಟಕಕ್ಕೆ 2.20 ಕೋ.ರೂ., ಘನತ್ಯಾಜ್ಯ ನಿರ್ವಹಣೆಗೆ 1 ಕೋ., ಬೀದಿ ದೀಪಕ್ಕೆ 1 ಕೋ., ಪಿಡಬ್ಲ್ಯೂಡಿ ಸಹಯೋಗದಲ್ಲಿ ಹಳೆ ಪಿ.ಬಿ. ರಸ್ತೆ ವಿಭಜಕದಲ್ಲಿ ಬೀದಿ ದೀಪ ಹಾಗೂ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗಾಗಿ 1.45 ಕೋ., ರಸ್ತೆ ಚರಂಡಿ, ಪಾದಚಾರಿ ಮೇಲು ಸೇತುವೆಗಳಿಗಾಗಿ 10 ಕೋ., ಊರಮ್ಮ ದೇವಸ್ಥಾನದಿಂದ ಬಾಹರ್‌ ಮಕಾನ್‌ ನಡುವೆ ಮೇಲು ಸೇತುವೆಗಾಗಿ 2.50 ಕೋ., ಪಾರ್ಕ್‌ ಅಭಿವೃದ್ಧಿಗೆ 1 ಕೋ. ರೂ., ನಗರಸಭೆ ಹೊಸ ಕಟ್ಟಡ, ವಾಣಿಜ್ಯ ಮಳಿಗೆಗಳ ದುರಸ್ತಿಗೆ 2.40 ಕೋಟಿ ರೂ., ಸಾಮೂಹಿಕ ಶೌಚಾಲಯಕ್ಕಾಗಿ 30 ಲಕ್ಷ ರೂ., ವಿವಿಧ ಜನಾಂಗಗಳ ಸ್ಮಶಾನಗಳ ಕಾಂಪೌಂಡ್‌ ಹಾಗೂ ಮುಕ್ತಿಧಾಮ ವಾಹನ ಖರೀದಿಗೆ 20 ಲಕ್ಷ ರೂ., ಶೇ.24.10 ಯೋಜನೆಯಲ್ಲಿ ಎಸ್ಸಿ, ಎಸ್ಟಿ ವರ್ಗದವರ ಕಲ್ಯಾಣಕ್ಕಾಗಿ 75 ಲಕ್ಷ ರೂ., ಶೇ.7.25ರಲ್ಲಿ ಇತರೆ ಬಡ ಜನಾಂಗದವರ ಅಭಿವೃದ್ಧಿಗೆ 21 ಲಕ್ಷ ರೂ., ಶೇ.3ರಲ್ಲಿ ವಿಕಲಚೇತನರಿಗೆ 15 ಲಕ್ಷ ರೂ., ಕ್ರೀಡಾ ಚಟುವಟಿಕೆಗಾಗಿ 1 ಲಕ್ಷ ರೂ. ಸೇರಿದಂತೆ ಒಟ್ಟು 50.83 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ.

ಪ್ರಮುಖ ಆದಾಯಗಳು 
ಆಸ್ತಿ ತೆರಿಗೆ 3.64 ಕೋಟಿ ರೂ., ನೀರಿನ ಶುಲ್ಕ 6 ಲಕ್ಷ ರೂ., ವಾಣಿಜ್ಯ ಸಂಕೀರ್ಣದ ಬಾಡಿಗೆ 40 ಲಕ್ಷ ರೂ., ನೀರಿನ ಕಂದಾಯ .151 ಕೋ, ಉದ್ಯಮ ಪರವಾನಿಗೆಯ 7.5 ಲಕ್ಷ., ಎಸ್‌ಎಫ್‌ಸಿ, ನಲ್ಮ್, ವಿಶೇಷ ಅನುದಾನ, 14ನೇ ಹಣಕಾಸು ಯೋಜನೆ, ಬರಪರಿಹಾರ, ಕಚೇರಿ ಕಟ್ಟಡಕ್ಕಾಗಿ 1 ಕೋ.ರೂ. ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 52.50 ಕೋ. ರೂ. ಆದಾಯ ನಿರೀಕ್ಷಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next