ನವದೆಹಲಿ: ಭಾರತ ಸೇರಿದಂತೆ ಏಷ್ಯಾದ 16 ರಾಷ್ಟ್ರಗಳಿಗೆ ಹವಾಮಾನ ವಿಕೋಪದ ಬಿಸಿ ತಟ್ಟಲಿದೆ. ಈ ರಾಷ್ಟ್ರಗಳಲ್ಲಿ ನೀರು ಮತ್ತು ಇಂಧನ ಪೂರೈಕೆಯಲ್ಲಿ ಭಾರೀ ಸಮಸ್ಯೆಯಾಗಲಿದೆ. ಹಿಂದೂ ಕುಶ್-ಹಿಮಾಲಯ ಪ್ರದೇಶದ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಹವಾಮಾನ ಸಮಸ್ಯೆಗಳು ಭೀಕರ ಪರಿಸ್ಥಿತಿಯನ್ನು ಸೃಷ್ಟಿಸಬಹುದಾಗಿದೆ. ಹೀಗಾಗಿ ಏಷ್ಯಾಗೆ ಇದು ಪ್ರಮುಖ ಕಾಳಜಿಯ ವಿಷಯವಾಗಿದೆ.
ಹಿಂದೂ ಕುಶ್-ಹಿಮಾಲಯ ಜಲಾನಯನ ಪ್ರದೇಶದ ಮೇಲೆ ಹವಾಮಾನ ಬದಲಾವಣೆ ಪರಿಣಾಮ ಬೀರುವುದರಿಂದ ಭಾರತಕ್ಕೂ ಇದರ ಅನುಭವವಾಗಲಿದೆ. ಹೀಗಾಗಿ ಪ್ರಾದೇಶಿಕ ನೀರಿನ ಹರಿವನ್ನು ರಕ್ಷಿಸಲು ಒಂದು ಸಂಘಟಿತ ಕ್ರಮದ ಅಗತ್ಯವಿದೆ. ಹಿಂದೂ ಕುಶ್-ಹಿಮಾಲಯ ಪ್ರದೇಶದಲ್ಲಿ 10 ನದಿಗಳು ಹರಿಯುತ್ತವೆ. ಈ ನದಿಗಳು ಸುಮಾರು 100 ಕೋಟಿ ಜನರ ಜೀವನದ ಆಧಾರವಾಗಿವೆ. ಈ ಪ್ರದೇಶದಲ್ಲಿ ವಾರ್ಷಿಕ 4.3 ಲಕ್ಷ ಕೋಟಿ ಡಾಲರ್ ಜಿಡಿಪಿ ಉತ್ಪಾದನೆಯಾಗುತ್ತದೆ.
ಈ ಹತ್ತು ನದಿಗಳಲ್ಲಿ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಸೇರಿವೆ. ಈ ಎರಡು ನದಿಗಳು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿಯುತ್ತವೆ. ಇದರೊಂದಿಗೆ ಚೀನಾದ ಯಾಂಗ್ವೆ, ಯೆಲ್ಲೊ, ಮೆಕಾಂಗ್ ಮತ್ತು ಸಲ್ವಿನ್ ನದಿಗಳು ಸೇರಿವೆ.
“ಹಿಮ ಕರಗುವಿಕೆ, ವಿಪರೀಪ ಹವಾಮಾನ ವೈಪರೀತ್ಯದಂತಹ ಹವಾಮಾನ ಬದಲಾವಣೆಯು ಈಗಾಗಲೇ ಈ ಪ್ರದೇಶಕ್ಕೆ ಗಂಭೀರ ಬೆದರಿಕೆಗಳನ್ನು ಒಡ್ಡಿವೆ. ಈ ಪ್ರದೇಶದಲ್ಲಿ ನೀರು ಮತ್ತು ಇಂಧನಕ್ಕೆ ಸಂಬಂಧಿಸಿದ ಮೂಲಸೌಕರ್ಯ ನಿರ್ಮಾಣ ಕಾರ್ಯಗಳು ಸಮಸ್ಯೆಯನ್ನು ಹೆಚ್ಚಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ನೀರು ಮತ್ತು ಇಂಧನ ಸರಬರಾಜಿನಲ್ಲಿ ಭಾರೀ ವ್ಯತ್ಯಯವಾಗಲಿದೆ’ ಎಂದು ಚೀನಾ ನೀರಿನ ಅಪಾಯದ ಕುರಿತಾದ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ.