Advertisement

ಜ. 13-15: “ಆಳ್ವಾಸ್‌ ವಿರಾಸತ್‌ – 2017′

03:45 AM Jan 10, 2017 | |

ಮಂಗಳೂರು: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 23ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ “ಆಳ್ವಾಸ್‌ ವಿರಾಸತ್‌ – 2017′ ಜ. 13ರಿಂದ 15ರ ವರೆಗೆ ಜರಗಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಭಾ ಕಾರ್ಯಕ್ರಮ ಚಾಲನೆಗೊಳ್ಳಲಿದ್ದು, “ಆಳ್ವಾಸ್‌ ವಿರಾಸತ್‌’ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವ ಅಭಯಚಂದ್ರ ಜೈನ್‌, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ ಕಾರ್ಣಿಕ್‌, ಜಿಲ್ಲಾಧಿಧಿಕಾರಿ ಡಾ| ಜಗದೀಶ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಬೃಹತ್‌ ವೇದಿಕೆ
ಮೂಡಬಿದಿರೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಈ ವರ್ಷದ ಆಳ್ವಾಸ್‌ ವಿರಾಸತ್‌ ನಡೆಯಲಿದ್ದು, 150 ಅಡಿ ಉದ್ದ, 60 ಅಡಿ ಅಗಲದ ಈ ಬೃಹತ್‌ ವೇದಿಕೆಯಲ್ಲಿ 80ರಿಂದ 100 ಕಲಾವಿದರಿರುವ ತಂಡ ಪ್ರದರ್ಶನ ನೀಡಬಹುದಾಗಿದೆ. ಇದು ಬಯಲು ರಂಗ ವೇದಿಕೆಯಾಗಿದ್ದು, ಇದರ ಮೂರು ಭಾಗಗಳೂ ಸಂಪೂರ್ಣ ತೆರೆದುಕೊಂಡಿರುತ್ತವೆ. ಸುಮಾರು 40,000 ಪ್ರೇಕ್ಷಕರು ಯಾವುದೇ ಅಡೆತಡೆಯಿಲ್ಲದೇ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಸಂಸ್ಥೆಯ 25,000 ವಿದ್ಯಾರ್ಥಿಗಳು, 4,000 ನೌಕರರು, ಸ್ಥಳೀಯ ಸಾರ್ವಜನಿಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ. ದಿನಂಪ್ರತಿ ಮುಸ್ಸಂಜೆ ಪ್ರಾರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮ ಎರಡು ಅವಧಿಗಳದ್ದಾಗಿದ್ದು, ಮೊದಲ ಅವಧಿಯಲ್ಲಿ ವೈವಿಧ್ಯಪೂರ್ಣ ಸಂಗೀತವೂ ಮತ್ತು ಎರಡನೇ ಅವಧಿಯಲ್ಲಿ ವಿವಿಧ ನೃತ್ಯ ಪ್ರಕಾರಗಳು ಇಲ್ಲಿ ಮೇಳೈಸಲಿವೆ ಎಂದು ತಿಳಿಸಿದರು.

ಆಳ್ವಾಸ್‌ ವಿರಾಸತ್‌, ವರ್ಣ ವಿರಾಸತ್‌ ಗೌರವ
ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸೇರಿದಂತೆ ಸರಕಾರದ, ಸಂಘ – ಸಂಸ್ಥೆಗಳ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಮೇರು ನೃತ್ಯ ಕಲಾವಿದ ವಿ.ಪಿ. ಧನಂಜಯನ್‌ ಅವರನ್ನು 1 ಲಕ್ಷ ರೂ. ನಗದಿನೊಂದಿಗೆ ಪ್ರಸಸ್ತಿ ಪತ್ರವನ್ನಿತ್ತು ಪುರಸ್ಕರಿಸಲಾಗುವುದು. ರಾಜಸ್ಥಾನದ ಖ್ಯಾತ ಚಿತ್ರಕಲಾವಿದ ರೇವ ಶಂಕರ್‌ ಶರ್ಮಾ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ 2017ರ ಗೌರವವನ್ನು ಜ. 15ರಂದು ವಿರಾಸತ್‌ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25,000 ರೂ. ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದರು.

ಆಳ್ವಾಸ್‌ ಶಿಲ್ಪ – ವರ್ಣ ವಿರಾಸತ್‌
ಜ. 15ರ ವರೆಗೆ ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ಸಭಾಂಗಣದಲ್ಲಿ ಆಳ್ವಾಸ್‌ ಶಿಲ್ಪ ವಿರಾಸತ್‌ ಮತ್ತು ರಾಷ್ಟ್ರ ಮಟ್ಟದ ಖ್ಯಾತ ಆದಿವಾಸಿ ಕಲಾವಿದರಿಂದ ಚಿತ್ರಕಲಾ ಶಿಬಿರ ನಡೆಯಲಿದೆ. ಬುಡಕಟ್ಟು ಜನಾಂಗವಾದ ಬಸ್ತರ್‌ನ ಐವರು ಕಲಾವಿದರು ಲೋಹಶಿಲ್ಪದಲ್ಲಿ ಸ್ಥಳೀಯ ದೈವಗಳ ಕಂಚಿನ ಮುಖವಾಡಗಳನ್ನು ರಚಿಸಲಿದ್ದಾರೆ. ನಾಡಿನ ಹತ್ತು ಕಲಾವಿದರು ಮರದ ಕೆತ್ತನೆಯಲ್ಲಿ 4ರಿಂದ 6 ಅಡಿ ಎತ್ತರದ ಕೋಟಿ – ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ. ಜ. 11ರಿಂದ 15ರ ವರೆಗೆ ಸಮಕಾಲೀನ ಕಲಾವಿದರ ಚಿತ್ರಕಲಾ ಶಿಬಿರ ನಡೆಯಲಿದ್ದು, ದೇಶದ 20ಕ್ಕೂ ಹೆಚ್ಚು ಚಿತ್ರ ಕಲಾವಿದರು ವರ್ಣ ವಿರಾಸತ್‌ನಲ್ಲಿ ಭಾಗವಹಿಸಲಿದ್ದಾರೆ. ನುಡಿಸಿರಿ ಸಭಾಂಗಣದಲ್ಲಿ ರಚನೆಗೊಂಡ ಕಲಾಕೃತಿಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸ‌ಲಾಗಿದೆ ಎಂದರು.

Advertisement

ದೀಪಾಲಂಕಾರದ ವೈಭವ,
ತಿಂಡಿ ತಿನಿಸುಗಳ ಮಳಿಗೆ

ಆಳ್ವಾಸ್‌ ವಿರಾಸತ್‌ನ ಮೂರು ದಿನಗಳ ಕಾಲವೂ ಅದ್ಭುತ ದೀಪಾಲಂಕಾರದ ಮೂಲಕ ಉತ್ಸವಕ್ಕೆ ಭವ್ಯತೆ ನೀಡಲಾಗುವುದಲ್ಲದೇ, ಶುಚಿ-ರುಚಿಯಾದ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳು ಆಹಾರ ಪ್ರಿಯರನ್ನು ಆಕರ್ಷಿಸಲಿವೆ. ದಿನವೊಂದಕ್ಕೆ 40,000ಕ್ಕಿಂತಲೂ ಮಿಕ್ಕಿ ಕಲಾಪ್ರಿಯರು ಸೇರುವ ಈ ಉತ್ಸವಕ್ಕೆ ಆಗಮಿಸುವವರಿಗೆ ವಿಶಾಲವಾದ ಹಾಗೂ ವ್ಯವಸ್ಥಿತವಾದ ವಾಹನ ನಿಲುಗಡೆಯ ಸ್ಥಳಾವಕಾಶವನ್ನು ಮಾಡಲಾಗಿದೆ. ಪೇಟೆಯಿಂದ ಪುತ್ತಿಗೆಗೆ ಮತ್ತು ಪುತ್ತಿಗೆಯಿಂದ ಪೇಟೆಯವರೆಗೆ ಉಚಿತ ಬಸ್‌ನ ವ್ಯವಸ್ಥೆಯನ್ನು ಉತ್ಸವದ ಸಂದರ್ಭದಲ್ಲಿ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

2018ಕ್ಕೆ ವಿಶ್ವ ನುಡಿಸಿರಿ-ವಿರಾಸತ್‌
2018 ಜನವರಿಯಲ್ಲಿ 24ನೇ ವಿರಾಸತ್‌ ನಡೆಯಲಿದ್ದು, 2018 ಡಿಸೆಂಬರ್‌ಗೆ ವಿಶ್ವ ನುಡಿಸಿರಿ ಜತೆಗೆ ವಿಶ್ವ ವಿರಾಸತ್‌ ನಾಲ್ಕು ದಿನಗಳ ಕಾಲ ಒಟ್ಟಿಗೆ ನಡೆಯಲಿದೆ. ಬಳಿಕ ಪ್ರತೀ ವರ್ಷ ನುಡಿಸಿರಿ ಹಾಗೂ ವಿರಾಸತ್‌ ಅನ್ನು ಜತೆಯಾಗಿ ನಡೆಸಲಾಗುವುದು. ವೆಚ್ಚ, ತಯಾರಿಗಾಗಿ ವಿದ್ಯಾರ್ಥಿಗಳ ಶ್ರಮ, ಸಮಯದ ದೃಷ್ಟಿಯಲ್ಲಿ ಈ ರೀತಿಯ ನಿರ್ಧಾರಕ್ಕೆ ಬರಲಾಗುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 88 ನುಡಿಸಿರಿ-ವಿರಾಸತ್‌ ಘಟಕಗಳನ್ನು ರಚಿಸಲಾಗಿದೆ. ಫೆಬ್ರವರಿಯಲ್ಲಿ ಇನ್ನೂ 20 ಕಡೆಗಳಲ್ಲಿ ಘಟಕಗಳು ರಚನೆಗೊಳ್ಳಲಿವೆ ಎಂದು ಎಂದು ಮೋಹನ ಆಳ್ವ ತಿಳಿಸಿದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ಪದ್ಮನಾಭ ಶೆಣೈ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಳ್ವಾಸ್‌ ವಿರಾಸತ್‌ನ ಮೊದಲನೆಯ ದಿನ ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಳ ಮೇರು ಕಲಾವಿದರಿಬ್ಬರು ಕೊಳಲು-ಬಾನ್ಸುರಿ ಜುಗಲ್‌ ಬಂದಿಯ ಮೂಲಕ ಜ. 13ರಂದು ಪ್ರಥಮ ಬಾರಿಗೆ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕೊಳಲಿನಲ್ಲಿ ಶಶಾಂಕ್‌ ಸುಬ್ರಹ್ಮಣ್ಯಂ, ಬಾನ್ಸುರಿಯಲ್ಲಿ ಪ್ರವೀಣ್‌ ಗೋಡಿVಂಡಿ, ಮೃದಂಗದಲ್ಲಿ ವಿದ್ವಾನ್‌ ಭಕ್ತವತ್ಸಲಂ, ತಬ್ಲಾದಲ್ಲಿ ಪಂಡಿತ್‌ ಶುಭಂಕರ್‌ ಬ್ಯಾನರ್ಜಿ ಸಹಕರಿಸಲಿದ್ದಾರೆ. 9.15ರಿಂದ ಆಳ್ವಾಸ್‌ ವಿದ್ಯಾರ್ಥಿಗಳಿಂದ ಒಡಿಶಾದ ಗೋಟಿಪುವಾ ನೃತ್ಯ, ನಿಯೋ ಕಥಕ್‌ ನೃತ್ಯ, ಗುಜರಾತಿನ ಹುಡೋರಾಸ್‌, “ಮಧುಮಾಸದ ನೆನಪು’ ಬಡಗು ಯಕ್ಷಗಾನ ರೂಪಕ ಹಾಗೂ ಕೇರಳದ ಅರ್ಬನಮುಟ್ಟು ಜರಗಲಿದೆ.

ಜನವರಿ 14ರಂದು ಸಂಜೆ 6ರಿಂದ ಟ್ರಿನಿಟಿ ನಾದ ಮಾಧುರ್ಯ ನಡೆಯಲಿದೆ. ಪುರ್ಬಯಾನ್‌ ಚಟರ್ಜಿ (ಸಿತಾರ್‌), ಯು. ರಾಜೇಶ್‌ (ಮ್ಯಾಂಡೋಲಿನ್‌), ರಂಜಿತ್‌ ಬೇರಟ್‌ (ಡ್ರಮ್ಸ್‌), ಗುಲ್‌ರಾಜ್‌ ಸಿಂಗ್‌ (ಕೀ ಬೋರ್ಡ್‌) ಹಾಗೂ ಭೂಷಣ್‌ ಪರ್ಚುರೆ ತಬ್ಲಾದಲ್ಲಿ ಸಹಕರಿಸಲಿದ್ದಾರೆ. ದೇವರ ನಾಮದ ಹಾಡುಗಾರಿಕೆಗೆ ಹೆಸರುವಾಸಿಯಾಗಿರುವ ಬೆಂಗಳೂರಿನ ಒಂಬತ್ತು ವರ್ಷದ ಮಾಸ್ಟರ್‌ ರಾಹುಲ್‌ ವೆಲ್ಲಾಲ್‌ ಅವರು ಆಳ್ವಾಸ್‌ ವಿರಾಸತ್‌ನಲ್ಲಿ ಮೊತ್ತಮೊದಲ ಬಾರಿಗೆ ತನ್ನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಿದ್ದಾರೆ. ಅಂಗರಾಗದ ಮೂಲಕ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳ ಮಿಶ್ರ ನೃತ್ಯರೂಪಕವು ನಡೆಯಲಿದ್ದು, ಭುವನೇಶ್ವರ ಆರಾಧನಾ ಡ್ಯಾನ್ಸ್‌ ಅಕಾಡೆಮಿಯ ಶಾಸ್ತ್ರೀಯ ಮತ್ತು ಜಾನಪದದ 55 ಕಲಾವಿದರು ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯರೂಪಕದ ಮೂಲಕ ಮನೋರಂಜನೆ ನೀಡಲಿದ್ದಾರೆ ಎಂದರು.

ಮೂರು ದಿನಗಳ ಕಾಲವೂ ಆಳ್ವಾಸ್‌ನ ಬಹುಸಂಖ್ಯೆಯ ಕಲಾವಿದರಿಂದ ದೇಶೀಯ, ಅಂತಾರಾಷ್ಟ್ರೀಯ ನೃತ್ಯ-ಸಾಹಸ ಕಲೆಗಳ ವೈವಿಧ್ಯಪೂರ್ಣ ಪ್ರದರ್ಶನ ನಡೆಯಲಿವೆ.

ಜ. 15ರಂದು ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕರಾದ ಮುಂಬಯಿಯ ಶಾನ್‌ ಹಾಗೂ ಪಾಯಲ್‌ದೇವ್‌ ಅವರು ಸಂಗೀತಾಸಕ್ತರ ಮನಸ್ಸು ಸೂರೆಗೊಳ್ಳಲಿದ್ದಾರೆ. ಉಡುಪಿಯ ಲತಾಂಗಿ ಸ್ಕೂಲ್‌ ಆಫ್‌ ಮ್ಯೂಸಿಕ್‌ನ ಗಾಯನ ಕಲಾವಿದೆಯರಾದ ಗಾರ್ಗಿ, ಅರ್ಚನಾ, ಸಮನ್ವಿ ಅವರಿಂದ “ಗಾನಾರ್ಚನ’ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next