Advertisement

1 ರೂ. ಕಮಿಷನ್‌ ಕೇಳಿದ್ದರೂ ರಾಜಕೀಯದಿಂದಲೇ ನಿವೃತ್ತಿ: ಸಿದ್ದರಾಮಯ್ಯ

09:00 PM Jul 22, 2022 | Team Udayavani |

ದಾವಣಗೆರೆ: ತಮ್ಮ ಅಧಿಕಾರವಧಿಯಲ್ಲಿ ನಾನೇನಾದರೂ ಒಂದೇ ಒಂದು ರೂಪಾಯಿ ಕಮಿಷನ್‌ ಕೇಳಿದ್ದೆ ಎಂಬುದನ್ನು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ಶುಕ್ರವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಶೇ.40 ಕಮಿಷನ್‌ ನೀಡಬೇಕೆಂದು ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷರು ನೇರವಾಗಿ ಪ್ರಧಾನಿ ಅವರಿಗೇ ಪತ್ರ ಬರೆದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತನಿಖೆ ನಡೆಸಿಲ್ಲ. ನಾನು 5 ವರ್ಷ ಮುಖ್ಯಮಂತ್ರಿ, 12 ವರ್ಷ ಹಣಕಾಸು ಸಚಿವನಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ರೂಪಾಯಿ ಕಮಿಷನ್‌ ಕೇಳಿದ್ದೆ ಎಂಬುದನ್ನು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಲಾಗಿದೆ. ಮೊದಲೇ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಲಾಗುತ್ತದೆ ಎಂಬುದು ಗೊತ್ತಿತ್ತು. ವಿಚಾರಣೆ ನಡೆಯುತ್ತಿದ್ದಾಗಲೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದರು. ಸರ್ಕಾರ ಕೂಡಲೇ ಬಿ ರಿಪೋರ್ಟ್‌ ರದ್ದುಪಡಿಸಿ, ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದರು.

ಮಂಪರು ಪರೀಕ್ಷೆಗೊಳಪಡಿಸಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಹುತೇಕ ಎಲ್ಲ ಸಚಿವರೂ ಭಾಗಿಯಾಗಿದ್ದಾರೆ. ಹಾಗಾಗಿಯೇ ಅಮೃತ್‌ ಪೌಲ್‌ ವಿಚಾರಣೆಯನ್ನು ಸರಿಯಾಗಿ ನಡೆಸಲಾಗುತ್ತಿಲ್ಲ. ವಿಚಾರಣೆಯನ್ನು ಸರಿಯಾಗಿ ರೆಕಾರ್ಡ್‌ ಸಹ ಮಾಡಲಾಗುತ್ತಿಲ್ಲ. ಹಾಗಾಗಿ ಅಮೃತ್‌ ಪೌಲ್‌ಗೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ದೇವನೂರು ಪುಸ್ತಕ ಓದಿ
ದೇಶಭಕ್ತಿ ಬಗ್ಗೆ ಮಾತನಾಡುವ ಆರ್‌ಎಸ್‌ಎಸ್‌, ಬಿಜೆಪಿಯ ಒಬ್ಬರೇ ಒಬ್ಬ ನಾಯಕರು ಸ್ವಾತಂತ್ರÂಕ್ಕಾಗಿ ಹೋರಾಡಿಲ್ಲ. ಹುತಾತ್ಮರಾಗಿಲ್ಲ. ಸಾವರ್ಕರ್‌ ಬಿಡುಗಡೆ ಮಾಡುವಂತೆ ಕೇಳಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಇವರು ದೇಶಭಕ್ತರಾ? ದೇವನೂರು ಮಹಾದೇವ, ಆರ್‌ಎಸ್‌ಎಸ್‌ ಬಗ್ಗೆ ಬಹಳ ಚೆನ್ನಾಗಿ ಪುಸ್ತಕ ಬರೆದಿದ್ದಾರೆ. ಎಲ್ಲರೂ ಆ ಪುಸ್ತಕವನ್ನ ಓದಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

Advertisement

ಸಿಎಂ ಕುರ್ಚಿಗಾಗಿ ಟವೆಲ್‌ ಹಾಕಿಲ್ಲ
ಶಿರಾ: ಮುಖ್ಯಮಂತ್ರಿ ಕುರ್ಚಿಗಾಗಿ ನಾನು ಟವೆಲ್‌ ಹಾಕಿ ಕುಳಿತಿಲ್ಲ. ಜನತೆ ನೀಡುವ ತೀರ್ಪಿಗೆ ಬದ್ಧವಾಗಿರುತ್ತೇವೆ. ಅಧಿಕಾರಕ್ಕಾಗಿ ಸಿದ್ಧರಾಮೋತ್ಸವ ಮಾಡುತ್ತಿಲ್ಲ, ನನ್ನ 75ನೇ ಹುಟ್ಟುಹಬ್ಬ ಆಚರಣೆಯನ್ನು ಕೆಲವರು ಸಿದ್ಧರಾಮೋತ್ಸವ ಎಂದು ಬಿಂಬಿಸುತ್ತಿದ್ದಾರೆ. ನಾನು ಎಂದಿಗೂ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ, ನನ್ನ ಸ್ನೇಹಿತರು, ಹಿತೈಷಿಗಳು ಆಚರಣೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಶುಕ್ರವಾರ ಶಿರಾ ನಗರಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

ಕೆ.ಎಸ್‌.ಈಶ್ವರಪ್ಪ ಮಾಡಿದ ಬಾನಗಡಿ, ಅವ್ಯವಹಾರ ನೋಡಿದರೆ ಅವರಿಗೆ ಜೈಲಲ್ಲ, ಕಾಲಾಪಾನಿಗೇ ಹಾಕಬೇಕು. ಸಂತೋಷ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಎಂದು ಹೇಳಿಕೊಳ್ಳುತ್ತಾರೆ. ಮೃತ ಸಂತೋಷ ಪತ್ನಿಯೇ ನ್ಯಾಯ ದೊರೆತಿಲ್ಲ ಎಂದು ರಾಜ್ಯಪಾಲರಿಗೆ ದೂರಿದ್ದಾರೆ. ಇಡೀ ಪ್ರಕರಣ ಎನ್‌ಐಎ ತನಿಖೆ ಆಗಬೇಕು.
-ಬಿ.ಕೆ.ಹರಿಪ್ರಸಾದ್‌, ಮೇಲ್ಮನೆ ಪ್ರತಿಪಕ್ಷದ ನಾಯಕ

ನನ್ನ ಮೇಲಿದ್ದ ಆರೋಪದಿಂದ ಮುಕ್ತನಾಗಿ ಹೊರ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ, ಸ್ಥೈರ್ಯ ನೀಡುವಂತೆ ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಕೋರಿದ್ದೇನೆ. ಇಲ್ಲಿಂದಲೇ ನನ್ನ ಮುಂದಿನ ಕೆಲಸ ಶುರುವಾಗಲಿದೆ.
-ಕೆ.ಎಸ್‌. ಈಶ್ವರಪ್ಪ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next