Advertisement

ರಾಜ್ಯದಲ್ಲಿ 1.86 ಲಕ್ಷ ಟನ್‌ ರಸಗೊಬ್ಬರ ದಾಸ್ತಾನು; ಸಚಿವ ಶಿವರಾಮ್ ಹೆಬ್ಬಾರ್

08:05 PM Sep 23, 2022 | Team Udayavani |

ವಿಧಾನ ಪರಿಷತ್ತು: ರಾಜ್ಯದಲ್ಲಿ ಪ್ರಸ್ತುತ 1.86 ಲಕ್ಷ ಟನ್‌ ರಸಗೊಬ್ಬರ ದಾಸ್ತಾನಿದ್ದು, ಯಾವುದೇ ರೀತಿಯ ಕೊರತೆ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.

Advertisement

ಶುಕ್ರವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 2022ರ ಏಪ್ರಿಲ್‌ 1ಕ್ಕೆ ಆರಂಭಿಕ ಶಿಲ್ಕು ರೂಪದಲ್ಲಿ 5.95 ಲಕ್ಷ ಟನ್‌ ಇದ್ದು, ಅಲ್ಲಿಂದ ಈಚೆಗೆ ಅಂದರೆ ಸೆ. 20ರವರೆಗೆ 30.40 ಲಕ್ಷ ಟನ್‌ ಪೂರೈಕೆ ಆಗಿದೆ.

ಪ್ರಸ್ತುತ 1.86 ಲಕ್ಷ ಟನ್‌ ರಸಗೊಬ್ಬರ ದಾಸ್ತಾನಿದೆ. 112 ಕಳಪೆ ಗುಣಮಟ್ಟದ ರಸಗೊಬ್ಬರದ ಮಾದರಿಗಳನ್ನು ಪರಿವೀಕ್ಷಿಸಿ ಮರು ವಿಶ್ಲೇಷಣೆಗೊಳಪಡಿಸಲಾಗಿದೆ. ಕಳಪೆ ಎಂದು ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಮಾಹಿತಿ ನೀಡಿದರು.

ಹಾಗಿದ್ದರೆ, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಗೊಬ್ಬರಕ್ಕಾಗಿ ರೈತರು ಯಾಕೆ ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುತ್ತಿದ್ದಾರೆ ಎಂದು ಖಾರವಾಗಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಸಗೊಬ್ಬರ ಬೇಡಿಕೆ ಇರುವ ಕಡೆಗಳಲ್ಲಿ ದಾಸ್ತಾನಿಲ್ಲ; ಅದೇ ರೀತಿ ಸಾಕಷ್ಟು ದಾಸ್ತಾನು ಇರುವ ಕಡೆಗಳಲ್ಲಿ ಬೇಡಿಕೆ ಇಲ್ಲ. ಸಮನ್ವಯ ಮತ್ತು ಸಂವಹನ ಕೊರತೆಯಿಂದ ಈ ಸಮಸ್ಯೆ ಆಗಿದೆ. ಶೀಘ್ರ ಅದನ್ನು ಸರಿಪಡಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.

ಗ್ಲೈಫೋಸೇಟ್‌ ನಿಷೇಧಕ್ಕೆ ಆಗ್ರಹ: ಇದೇ ವೇಳೆ ಬಿಜೆಪಿಯ ಚಲವಾದಿ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್‌ನ ಎಸ್‌. ರವಿ ಗ್ಲೈಫೋಸೇಟ್‌ (Glyphosate)ನ ಅತಿಯಾದ ಬಳಕೆಯಿಂದ ಮಣ್ಣಿನ ಫ‌ಲವತ್ತತೆ ನಾಶವಾಗುತ್ತಿದೆ.

Advertisement

ಕೇರಳದಿಂದ ಬಂದು ಸುಮಾರು 80 ಸಾವಿರದಿಂದ 1 ಲಕ್ಷ ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಅಲ್ಲಿ ಈ ಗ್ಲೈಫೋಸೇಟ್‌ ಅನ್ನು ಹೇರಳವಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಆದ್ದರಿಂದ ಇದನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಟಾರ್‌, ನನ್ನ ಕ್ಷೇತ್ರದಲ್ಲೂ ಈ ಸಮಸ್ಯೆ ಕಂಡುಬಂದಿದೆ. ಶುಂಠಿಗೆ ಈ ಗೊಬ್ಬರ ಸಿಂಪರಣೆ ಮಾಡಲಾಗುತ್ತಿದೆ. ಆದರೆ, ನಿಷೇಧ ತೀರ್ಮಾನ ಕೇಂದ್ರ ಸರ್ಕಾರದ ಹಂತದಲ್ಲಿ ಆಗಬೇಕು ಎಂದು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರವಿ, ನೆರೆಯ ಕೇರಳ, ಪಂಜಾಬ್‌, ಹರಿಯಾಣದಲ್ಲಿ ಇದೇ ಗೊಬ್ಬರವನ್ನು ನಿಷೇಧಿಸಲಾಗಿದೆ. ಅಲ್ಲಿ ಸಾಧ್ಯವಾಗಿದ್ದು, ಇಲ್ಲಿ ಯಾಕೆ ಆಗುವುದಿಲ್ಲ ಎಂದು ಕೇಳಿದರು. ಆಗ ಸಚಿವರು, ನಿಷೇಧಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next