ಮಂಡ್ಯ: ಪ್ರಧಾನಮಂತ್ರಿ ನರೇಂದ್ರಮೋದಿ ಮಾ.12 ರಂದು ಜಿಲ್ಲೆಗೆ ಆಗಮಿಸಲಿದ್ದು, ನಗರದ ಸರ್ಕಾರಿ ಅತಿಥಿ ಗೃಹದ ವೃತದಿಂದ ಹಳೇ ಎಂವಿಜಿ ರಸ್ತೆಯವರೆಗೆ ರೋಡ್ ಶೋ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.
ನಗರದ ಪ್ರವಾಸಿ ಮಂದಿರದ ವೃತ್ತದಿಂದ ಹಳೇ ಎಂವಿಜಿ ರಸ್ತೆಯವರಿಗೆ ಪಾದಯಾತ್ರೆ ಮೂಲಕ ತೆರಳಿದ ಅವರು, ರಸ್ತೆಯ ಶುಚಿತ್ವ, ದುರಸ್ತಿ, ಕುರಿತು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿ, ನಾಳೆಯಿಂದ ಎಲ್ಲ ಕೆಲಸಗಳು ಪ್ರಾರಂಭವಾಗಬೇಕು ಎಂದು ಸೂಚಿಸಿದರು.
ಪ್ರವಾಸಿ ಮಂದಿರದ ಸರ್ಕಲ್ನಿಂದ ರೋಡ್ ಶೋ ಪ್ರಾರಂಭವಾಗಿ, ಸಂಜಯ್ ಸರ್ಕಲ್ ಮಾರ್ಗವಾಗಿ ನಂದ ಸರ್ಕಲ್ನಲ್ಲಿ ರೋಡ್ ಶೋ ಮುಕ್ತಾಯವಾಗಲಿದೆ. ಸುಮಾರು 1.5 ಕಿ.ಮೀ ರೋಡ್ ಶೋ ನಡೆಯಲಿದೆ. ಆದ್ದರಿಂದ ಪ್ರಧಾನಮಂತ್ರಿ ರೋಡ್ ಶೋ ವೇಳೆ ಯಾವುದೇ ರೀತಿಯ ಗೊಂದಲ, ಗಲಾಟೆ, ಲೋಪದೋಷಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಎನ್.ಯತೀಶ್, ತಹಶೀಲ್ದಾರ್ ವಿಜಯ್ಕುಮಾರ್, ನಗರಸಭಾ ಆಯುಕ್ತ ಮಂಜುನಾಥ್, ಪರಿಸರ ವಿಭಾಗದ ಅಭಿಯಂತರ ರುದ್ರೇಗೌಡ, ಅಭಿಯಂತರ ರವಿಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನರೇಶ್ ಸೇರಿದಂತೆ ಮತ್ತಿತರರಿದ್ದರು.