Advertisement

ಲಕ್ಷ ದಾಟಿತು; ಒಂದೇ ದಿನ ದೇಶದ 1.17 ಲಕ್ಷ ಜನರಿಗೆ ಸೋಂಕು

02:49 AM Jan 08, 2022 | Team Udayavani |

ಹೊಸದಿಲ್ಲಿ/ಬೆಂಗಳೂರು: ಭಾರತಕ್ಕೂ ಕೊರೊನಾ ಮೂರನೇ ಅಲೆಯ ಪ್ರವೇಶವಾಗಿರುವುದನ್ನು ಖಚಿತಪಡಿಸುವಂತೆ, ದೇಶದಲ್ಲಿ ಒಮಿಕ್ರಾನ್‌ ಹಾಗೂ ಡೆಲ್ಟಾ ರೂಪಾಂತರಿ ಅಬ್ಬರಿಸತೊಡಗಿವೆ. ಗುರುವಾರದಿಂದ ಶುಕ್ರವಾರಕ್ಕೆ ಕೇವಲ 24 ಗಂಟೆಗಳಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ ಲಕ್ಷ ದಾಟಿದೆ.

Advertisement

ಬರೋಬ್ಬರಿ 14 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 1,17,100 ಮಂದಿಯ ವರದಿ ಪಾಸಿಟಿವ್‌ ಬಂದಿದೆ. 302 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 3,007 ಒಮಿಕ್ರಾನ್‌ ಕೇಸುಗಳು ಪತ್ತೆ ಯಾಗಿದ್ದು, 1,999 ಮಂದಿ ಗುಣಮುಖರಾಗಿದ್ದಾರೆ. ಎರಡನೇ ಅಲೆಗೆ ಹೋಲಿಸಿದರೆ, ಮೂರನೇ ಅಲೆಯಲ್ಲಿ ಒಮಿಕ್ರಾನ್‌ ಕಾರಣದಿಂದಾಗಿ ಸೋಂಕು ಕ್ಷಿಪ್ರವಾಗಿ ವ್ಯಾಪಿಸುತ್ತಿದೆ.

ಮಹಾರಾಷ್ಟ್ರದ ಪಾಲೇ ಹೆಚ್ಚು
ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ ಪತ್ತೆ ಯಾದ 1.17 ಲಕ್ಷ ಸೋಂಕಿತರ ಪೈಕಿ ಗರಿಷ್ಠ ಮಂದಿ ಇರುವುದು ಮಹಾರಾಷ್ಟ್ರದಲ್ಲಿ. ಇಲ್ಲಿ ಒಂದೇ ದಿನ 40,925 ಪ್ರಕರಣಗಳು ಪತ್ತೆಯಾಗಿವೆ. ದಿಲ್ಲಿಯಲ್ಲಿ 17,335 ಮಂದಿಗೆ ಸೋಂಕು ದೃಢಪಟ್ಟಿದೆ.

150 ಕೋಟಿಯ ಮೈಲುಗಲ್ಲು
ಶುಕ್ರವಾರ ಒಂದೇ ದಿನ ದೇಶಾದ್ಯಂತ 81 ಲಕ್ಷಕ್ಕೂ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದ್ದು, ಒಟ್ಟಾರೆ ಲಸಿಕೆ ವಿತರಣೆ 150 ಕೋಟಿ ಡೋಸ್‌ಗಳ ಮೈಲುಗಲ್ಲು ಸಾಧಿಸಿದೆ. ಪ್ರಧಾನಿ ಮೋದಿ ಅವರೂ ಇದನ್ನು ಮಹತ್ವದ ಮೈಲುಗಲ್ಲು ಎಂದು ಬಣ್ಣಿಸಿ, ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆಯ 21ವಿದ್ಯಾರ್ಥಿಗಳು, ಓರ್ವ ಶಿಕ್ಷಕರಲ್ಲಿ ಕೋವಿಡ್ ದೃಢ : ಶಾಲೆಗೆ 7 ದಿನ ರಜೆ

Advertisement

1.99 ಕೋಟಿ ಮಕ್ಕಳಿಗೆ ಲಸಿಕೆ
15ರಿಂದ 18ರ ವಯೋಮಾನದ ಮಕ್ಕಳಿಗೆ ಲಸಿಕೆ ವಿತರಣೆಯೂ ವೇಗವಾಗಿ ಸಾಗುತ್ತಿದ್ದು, ವಿತರಣೆ ಆರಂಭ ವಾದ ಕೇವಲ 5 ದಿನಗಳ ಅವಧಿಯಲ್ಲಿ 1,99,64,801 ಮಕ್ಕಳು ಲಸಿಕೆ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ವೇಳೆ ಮಕ್ಕಳಿಗೆ ಲಸಿಕೆ ವಿತರಣೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿ ಇದೆ. ಇದುವರೆಗೆ 13 ಲಕ್ಷ ಮಕ್ಕಳಿಗೆ ಲಸಿಕೆ ವಿತರಣೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ| ಸುಧಾಕರ್‌ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 8,449 ಪ್ರಕರಣ
ರಾಜ್ಯದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಶುಕ್ರವಾ ರ 8,449 ಕೇಸುಗಳು ದೃಢಪಟ್ಟಿದ್ದು, ಬೆಂಗಳೂರೊಂದರಲ್ಲೇ 6,812 ಮಂದಿಗೆ ಕೊರೊನಾ ತಗಲಿದೆ. ರಾಜ್ಯದಲ್ಲಿ ಸದ್ಯ ಶೇ. 4.15ರಷ್ಟು ಪಾಸಿಟಿವಿಟಿ ದರವಿದೆ. 505 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ ನಾಲ್ವರು ಮೃತಪಟ್ಟಿದ್ದಾರೆ.
ಸಚಿವ ಅಶೋಕ್‌ಗೆ ಕೊರೊನಾ ಕಂದಾಯ ಸಚಿವ ಅಶೋಕ್‌ಗೆ ಕೊರೊನಾ ಪಾಸಿಟಿವ್‌ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಲಾಕ್‌ಡೌನ್‌ ಪರಿಹಾರವಲ್ಲ, ಲಾಕ್‌ಡೌನ್‌ ಹಳೆಯ ನೀತಿ. ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವ ಪ್ರಸ್ತಾವವೇ ಸರಕಾರದ ಮುಂದಿಲ್ಲ.
– ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next